ಯಾವ ಸಾಹಿತಿಗಳು ಮತ್ತು ಸಾಹಿತ್ಯ ಕೃತಿಗಳು ನನ್ನ ಮೇಲೆ ಪ್ರಭಾವ ಬೀರಿಲ್ಲ. ನನ್ನ ಮೇಲೆ ಪ್ರಭಾವ ಬೀರಿದ್ದು ಹಳ್ಳಿಯ ಮೂಲ ಬೇರುಗಳು ಎಂದು ಹಿರಿಯ ಸಾಹಿತಿ ಕೇಶವರೆಡ್ಡಿ ಹಂದ್ರಾಳ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನ ಐಎಂಎ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ಹಾಡ್ಲಹಳ್ಳಿ ಪಬ್ಲಿಕೇಷನ್ ಹಾಸನ ವತಿಯಿಂದ ಹಮ್ಮಿಕೊಂಡಿದ್ದ ದಯಾ ಗಂಗನಗಟ್ಟ ಬರೆದಿರುವ ಉಪ್ಪುಚ್ಚಿ ಮುಳ್ಳು ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಳ್ಳಿಯ ಬೇರುಗಳು ಕಾಡದ ಸಾಹಿತಿ ಗಟ್ಟಿಯಾದ ಕೃತಿಗಳನ್ನು ಬರೆಯಲು ಸಾಧ್ಯವಿಲ್ಲ. ತನ್ನ ಮೂಲಗಳನ್ನು ಗ್ರಹಿಸಲು ಸಾಧ್ಯವಾಗದ ಸಾಹಿತಿ ಒಳ್ಳೆಯದನ್ನು ಕೊಡಲಾರ. ಇಂದು ಹಲವರು ಅದ್ಬುತವಾಗಿ ಬರೆಯುವುದನ್ನು ನೋಡುತ್ತಿದ್ದೇವೆ. ಆದರೆ ವಿಮರ್ಶಕರು ಹೊಸ ಲೇಖಕರ ಕೃತಿಗಳನ್ನು ವಿಮರ್ಶೆ ಮಾಡುತ್ತಿಲ್ಲ. ಅದು ಬೇಕಾಗಿಯೂ ಇಲ್ಲ ಎಂದರು.
ಯಶವಂತ ಚಿತ್ತಾಲರು ಒಳ್ಳೆಯ ಕೃತಿಗಳನ್ನು ಕೊಟ್ಟಿದ್ದರೂ ವಿಮರ್ಶಕ ವರ್ಗ ಅವರ ಕೃತಿಗಳನ್ನು ವಿಮರ್ಶೆಗೆ ಒಳಪಡಿಸಲಿಲ್ಲ. ಅದೇ ರೀತಿ ಗ್ರಾಮೀಣ ಬದುಕಿಗೆ ಪೂರಕವಾಗಿ ದಯಾ ಗಂಗನಗಟ್ಟ ಅವರು ಉಪ್ಪುಚ್ಚಿ ಮುಳ್ಳು ಕೃತಿಯನ್ನು ಬರೆದಿದ್ದಾರೆ. ನಾನು ಕೂಡ ಹಳ್ಳಿಯ ಬದುಕನ್ನು ನನ್ನ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದೇನೆ. ನಾನು ಬಳಸುವ ಭಾಷೆಯ ಬಗ್ಗೆ ಕೆಲವರು ಕುಹಕದ ನುಡಿಗಳನ್ನು ಆಡಿದ್ದಾರೆ. ವಿಮರ್ಶಕರ ಕಣ್ಣ ಇತ್ತ ತೆರೆದುಕೊಳ್ಳಲಿಲ್ಲ ಎಂದು ಹೇಳಿದರು.
ವರ್ತಮಾನದ ಸಂಗತಿಗಳನ್ನು ಮತ್ತು ಬದುಕನ್ನ ತಮ್ಮ ಕೃತಿಗಳಲ್ಲಿ ಕಟ್ಟಿಕೊಡಬೇಕು. ಅದು ಬಿಟ್ಟು ಹಳೆಯ ಬದುಕು ಕಟ್ಟಿಕೊಡುವುದರಿಂದ ಏನೂ ಪ್ರಯೋಜವಿಲ್ಲ. 60-70ರ ದಶಕದಲ್ಲಿ ಹಸಿವಿನ ಬಗ್ಗೆ ಬರೆದರು. ನಾನು ಕೂಡ ಹಸಿವಿನ ಕುರಿತು ಬರೆದಿದ್ದೇನೆ. ಈಗ ಹಸಿವಿನ ಕುರಿತು ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಸಾಹಿತಿ ಎಸ್.ಗಂಗಾಧರಯ್ಯ ಮಾತನಾಡಿ, ಅಕ್ಷರಗಳಲ್ಲಿ ನಂಜನ್ನು ಇಡುತ್ತಿರುವ ಇಂತಹ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಹೀಗಾಗಿ ನಮ್ಮ ಆಲೋಚನ ಕ್ರಮವು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಬರೆಯುವ ಕ್ಷಣದ ಆನಂದವನ್ನು ಹೇಳಲಾಗದು. ಒಂದು ಕತೆಗೆ ಆರಂಭ ಮತ್ತು ಅಂತ್ಯವಿಲ್ಲ ಎಂದರು.
ಸಾಫ್ಟ್ವೇರ್ ಇಂಜಿನಿಯರನ್ನು ಮತ್ತ ಡಾಕ್ಟರನ್ನು ಸೃಷ್ಟಿಸಬಹುದು. ಆದರೆ ಸಾಹಿತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೂ ಫೇಸ್ಬುಕ್, ವಾಟ್ಸ್ಫ್ಗಳಲ್ಲಿ ಪ್ರಬಂಧ ಬರೆಯುವುದು ಹೇಗೆ, ಕವನಗಳನ್ನು ರಚಿಸುವುದು ಹೇಗೆ ಎಂದು ಹೇಳಿಕೆಗಳನ್ನು ಹಾಕುತ್ತಿರುವುದು ನೋಡಿದರೆ ಅವರಿಗೆ ಎಷ್ಟು ಧಾರ್ಡ್ಯವಿರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲೇಸಂ ಜಿಲ್ಲಾ ಶಾಖೆಯ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃತಿಕಾರ್ತಿ ದಯಾ ಗಂಗನಘಟ್ಟ ಮಾತನಾಡಿದರು.ಜಿಲ್ಲಾ ಕಾಸಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕಲೇಸಂ ಉಪಾಧ್ಯಕ್ಷೆ ಇಂದ್ರಮ್ಮ ಹಾಜರಿದ್ದರು.