ತುಮಕೂರು ಜಿಲ್ಲೆಯ ವೈದ್ಯರ ನಿರ್ಲಕ್ಷದಿಂದಾಗಿ ನಡೆದ ಬಾಣಂತಿ ಮತ್ತು ಎರಡು ಹಸುಗೂಸುಗಳ ಸಾವಿಗೆ ಕಾರಣಕರ್ತರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಕ್ಷಣ ರಾಜೀನಾಮೆ ನೀಡಬೇಕು, ಆರೋಪಿ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೊರೊನಾ ಕಾಲದಿಂದ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಗಳಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಡಾ.ಸುಧಾಕರ್ ಅವರೇ ಆರೋಗ್ಯ ಸಚಿವರಾಗಿ ಮುಂದುವರಿದರೆ ಸರಣಿ ವೈದ್ಯಕೀಯ ಹತ್ಯೆಗಳು ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ..
ನೇಮಕಾತಿಯಿಂದ ಹಿಡಿದು ವರ್ಗಾವಣೆ ವರೆಗೆ ಎಲ್ಲವೂ ದುಡ್ಡಿನ ಬಲದಿಂದಲೇ ನಡೆಯುತ್ತಿರುವ ಕಾರಣ ಯಾವ ಅಧಿಕಾರಿಯೂ ಯಾವ ಸಚಿವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಕರ್ತವ್ಯಭ್ರಷ್ಟ ಅಧಿಕಾರಿಗಳನ್ನು ಪ್ರಶ್ನಿಸುವ-ಶಿಕ್ಷಿಸುವ ನೈತಿಕತೆ ಭ್ರಷ್ಟ ಸಚಿವರಿಗೂ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.
ಗುಂಡಿಬಿದ್ದ ರಸ್ತೆಗಳಲ್ಲಿ ಜನ ಬಿದ್ದು ಸಾಯುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದವರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 40% ಕಮಿಷನ್ ನೀಡಲಿಕ್ಕಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಜನರನ್ನು ಸಾಯಿಸುವ ಸರ್ಕಾರವೇ ಹೊರತು ಬದುಕಿಸುವ ಸರ್ಕಾರ ಅಲ್ಲ ಎಂದು ಆಪಾದಿಸಿದ್ದಾರೆ.