ತಾಯಿ ಮತ್ತು ಎರಡು ಶಿಶುಗಳ ಮರಣದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಮತ್ತು ನಾಲ್ವರು ಶುಶ್ರೋಷಕಿಯರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ತಾಯಿ ಮತ್ತು ಎರಡು ಶಿಶುಗಳ ಮರಣದ ಸಂಬಂಧ ತನಿಖೆ ಮತ್ತು ಶಿಸ್ತುಕ್ರಮವನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಪ್ರಸೂತಿ ತಜ್ಞೆ ಮತ್ತು ಕರ್ತವ್ಯ ನಿರತ ನಾಲ್ವರು ಶುಶ್ರೂಷಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕರು 24 ಗಂಟೆಯ ಒಳಗಾಗಿ ಉತ್ತರಿಸುವಂತೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕ ಆರೋಗ್ಯ ಪದ್ದತಿಯಲ್ಲಿ ಆಧಾರ್ ಕಾರ್ಡ್, ತಾಯಿ ಕಾರ್ಡು ಇಲ್ಲದೆಯೂ ಆರೋಗ್ಯ ಸೇವೆಗಳನ್ನು ನೀಡುತ್ತಾ ಬರಲಾಗುತ್ತಿದೆ ಎಂದು ಹೇಳಲಾಗಿದೆ.
ರೋಗಿಯು ಯಾವುದೇ ದಾಖಲೆಗಳು ಅಂದರೆ ತಾಯಿ ಕಾರ್ಡು, ಆಧಾರ್ ಕಾರ್ಡು ಮತ್ತು ಪಡಿತರ ಚೀಟಿಗಳು ಇತರೆ ಕಾರ್ಡುಗಳು ಇಲ್ಲದೇ ಇದ್ದರೂ ಸಹ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡುವುದು ಆಸ್ಪತ್ರೆಗಳ ಮತ್ತು ಆರೋಗ್ಯ ಕೇಂದ್ರಗಳ ಆದ್ಯ ಕರ್ತವ್ಯ ಆಗಿರುತ್ತದೆ ಎಂದು ತಿಳಿಸಿದೆ.