ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳ ಪರೀಕ್ಷಾ ಶುಲ್ಕವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಕಡಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೌಲ್ಯಮಾಪನ ಕುಲಸಚಿವೆ ನಿರ್ಮಲ ರಾಜು ಭಾರತ ವಿದ್ಯಾರ್ಥಿ ಫೆಡರೇಷನ್ ನಿಯೋಗಕ್ಕೆ ಭರವಸೆ ನೀಡಿದರು. ಅಲ್ಲದೆ ಪರೀಕ್ಷಾ ಶುಲ್ಕವನ್ನು ಪಾವತಿಸುವ ದಿನಾಂಕವನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳ ಎಸ್.ಸಿ, ಎಸ್.ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ನಿಗದಿಪಡಿಸಿದ ಮೀಸಲಾತಿ ಆಧಾರದಲ್ಲೇ ಶುಲ್ಕ ಪಾವತಿಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಹೊರೆ ಆಗುವಂತೆ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ಉಂಟಾಗಿರುವ ಅಡಚಣೆಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮೌಲ್ಯಮಾಪನ ಕುಲಸಚಿವರು ತಿಳಿಸಿದರು.
ಎಸ್.ಎಫ್.ಐ. ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ ರಾಜ್ಯದ ಬೇರೆ ಬೇರೆ ವಿವಿಗಳಲ್ಲಿ ಪರೀಕ್ಷಾ ಶುಲ್ಕದ ಬಗ್ಗೆ ಅಧಿಸೂಚನೆಗಳನ್ನು ನೀಡಿ ಅದರ ಆಧಾರದ ಮೇಲೆ ಪರೀಕ್ಷಾ ಶುಲ್ಕವನ್ನು ಪಾವತಿಸಿಕೊಳ್ಳಬೇಕು. ಬಿಇಡಿ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಕಾರಣಾಂತರಗಳಿಂದ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಜಿ.ಕೆ.ನಾಗಣ್ಣ ಮಾತನಾಡಿ, ತಾಂತ್ರಿಕ ದೋಷಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು. ವಿವಿ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಿಕೊಳ್ಳುವಂತೆ ಕಾಲೇಜುಗಳಿಗೆ ಸೂಚನೆ ನೀಡಬೇಕು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.
ನಿಯೋಗದಲ್ಲಿ ಎಸ್ಎಫ್ಐ ನಗರಾಧ್ಯಕ್ಷ ಶಶಿವರ್ಧನ್ ಪಿ.ವಿ. ಜಿಲ್ಲಾ ಸಮಿತಿ ಸದಸ್ಯರಾದ ಸಿಂಚನ ಎಸ್.ಎಂ., ಪೂಜಾ ಬಿ.ಎಂ, ರಕ್ಷಿತ ಎಚ್.ಕೆ. ಮಾನಸ ಎಂ, ಮಧುಶ್ರೀ ಮತ್ತು ಲಕ್ಷ್ಮೀನಾರಾಯಣ, ರಾಮಾಂಜಿ, ಮುನಿರಾಜು, ಆಂಜಿನೇಯ ಇದ್ದರು.