ಉಡುಪಿ ಸೇರಿದಂತೆ ರಾಜ್ಯದ ಸೌಹಾರ್ದತೆಗೆ ಶ್ರಮಿಸುತ್ತಿದ್ದ ಜನಪರ ಚಿಂತಕ ಜಿ.ರಾಜಶೇಖರ್ ನಿಧನರಾಗಿದ್ದಾರೆ. ತುಂಬಾ ಸೂಕ್ಷ್ಮ ಮನಸ್ಸಿನ ರಾಜಶೇಖರ್ ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸುವಂತೆ ಮಾಡಲು ಸಾಕಷ್ಟು ಶ್ರಮಿಸಿದ್ದರು.
ಲಂಕೇಶ್ ಪತ್ರಿಕೆಯಲ್ಲಿ ಬರೆಹಗಳನ್ನು ಬರೆದು ರಾಜ್ಯದ ಗಮನ ಸೆಳೆದಿದ್ದರು. ಕೋಮು ಸೌಹಾರ್ದತೆ ನೆಲೆಸುವ ಸಲುವಾಗಿ ಬಲಪಂಥೀಯರನ್ನು ಎದುರು ಹಾಕಿಕೊಂಡು ಪತ್ರಿಕೆಯ ಮೂಲಕ ತೀಕ್ಷ್ಣವಾಗಿ ಟೀಕಿಸಿ ಬರೆಯುತ್ತಿದ್ದರು. ರಾಜಶೇಖರ್ ಅಪಾರ ಅಭಿಮಾನಿಗಳು, ಬೆಂಬಲಿಗರನ್ನು ಅಗಲಿದ್ದಾರೆ.
ಜಿ.ರಾಜಶೇಖರ್ ನಿಧನಕ್ಕೆ ಹಲವು ಗಣ್ಯರು ಕಂಪನಿ ಮಿಡಿದಿದ್ದಾರೆ.
ನೇರ-ನಿಷ್ಠುರ ನಡವಳಿಕೆಯ ಪ್ರಖರ ಚಿಂತಕ ಮತ್ತು ಸೌಹಾರ್ದ ಬದುಕಿನ ಹೋರಾಟಗಾರ ಜಿ.ರಾಜಶೇಖರ್ ಅಗಲಿಕೆ ನಮ್ಮೆಲ್ಲರ ಪಾಲಿಗೆ ತುಂಬಿಕೊಳ್ಳಲಾಗದ ನಷ್ಟ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಂಬಮಿ ಮಿಡಿದಿದ್ದಾರೆ.
ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ನಾನು ಸದಾ ನಿಮಗೆ ಆಭಾರಿ. ನೀವು ನನಗೆ ಸಿಕ್ಕಿದ ಅತ್ಯುತ್ತಮ ಓದುಗ-ವಿಮರ್ಶಕರು ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಇನ್ಯಾರೂ ತುಳಿಯದ ವಿಮರ್ಶೆಯ ಹಾದಿಯನ್ನು ತುಳಿದಿರಿ.ಇಂಗ್ಲಿಷಿನಲ್ಲಿ ರೇಮಂಡ್ ವಿಲಿಯಮ್ಸ್ ಇದ್ದ ಹಾಗೆ, ನಿಮಗೆ ವಿಲಿಯಮ್ಸನ ಅಕೆಡೆಮಿಕ್ ಹಿನ್ನೆಲೆ ಇರದುದ್ರೂ ಕೂಡ. ಸೂಕ್ಷ್ಮ ಸಹೃದಯತ್ವ, ಸಾಮಾಜಿಕ ಎಚ್ಚರ ಮತ್ತು ಅಪೂರ್ವ ಒಳನೋಟಗಳನ್ನು ಹೊಂದಿದ್ದ ನಿಮ್ಮವಿಮರ್ಶಾ ಮಾರ್ಗಕ್ಕೆ ವಾರಸುದಾರರು ಯಾರೂ ಕಾಣುತ್ತಿಲ್ಲ ಎಂದು ಹಿರಿಯ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಹೇಳಿದ್ದಾರೆ.
ಅಧಿಕಾರ, ಖ್ಯಾತಿ ಯಾವುದನ್ನೂ ಎಂದೂ ಬಯಸದೆ ಕನ್ನಡ ಸಾಹಿತ್ಯದ ಸಾಕ್ಷಿಪ್ರಜ್ಞೆಯಾಗಿದ್ದ ನಿಮ್ಮನ್ನು ಕಳೆದುಕೊಂಡ ಕನ್ನಡ ಸಂಸ್ಕೃತಿ ನಿಜಕ್ಕೂ ಬಡವಾಗಿದೆ. ನಿಮ್ಮ ಅಂತ್ಯ ವ್ಯಕ್ತಿಗತವಾಗ ನನಗಾದ ಅಪಾರ ವಷ್ಟ ಕೂಡಾ ಎಂದು ತಿಳಿಸಿದ್ದಾರೆ.
ಹೀಗೆ ಬದುಕಿದರೆ, ಇಷ್ಟು ಬದುಕಿದರೆ ಸಾಕು ಎನ್ನುವಂತೆ ಬದುಕಿದ ಚಿಂತಕ ಜಿ.ರಾಜಶೇಖರ್, ಸೌಹಾರ್ದ ಕರಾವಳಿ ಕುಟುಂಬದೊಳಗೆ ಶಾಶ್ವತ ನಿರ್ವಾತವೊಂದನ್ನು ಬಿಟ್ಟು ಹೋಗಿದ್ದಾರೆ. ಸದಾ ನೆನಪಲ್ಲಿರುತ್ತೀರಿ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಉಡುಪಿಯ ರಥಬೀದಿ ಕರ್ನಾಟಕದಲ್ಲಿ ಸದ್ದು ಮಾಡಿದ್ದು ರಥಬೀದಿ ಗೆಳೆಯರಿಂದ.ಅದರ ಅಧ್ವರ್ಯಗಳಲ್ಲೊಬ್ಬರಾದ ಚಿಂತಕ ಜಿ ರಾಜಶೇಖರ್ ನಮ್ಮನ್ನು ಅಗಲಿದ್ದಾರೆ ಎಂದು ಸಾಹಿತಿ ನಾಗರಾಜ್ ಶೆಟ್ಟಿ ಹೇಳಿದ್ದಾರೆ.
ಶಿವರಾಮ ಕಾರಂತರಂತವರನ್ನೂ ಬೌದ್ಧಿಕವಾಗಿ ಎದುರು ಹಾಕಿಕೊಳ್ಳಬಲ್ಲವರಾಗಿದ್ದ ಜಿಆರ್, ಕೊನೆ ತನಕ ತಾನು ನಂಬಿದ ತತ್ವಗಳಿಗೆ ಬದ್ಧರಾಗಿದ್ದವರು. ರಥಬೀದಿಯಲ್ಲಿ ಮುಂದೆಯೂ ಪರ್ಯಾಯವಿರುತ್ತದೆ,ಆದರೆ ರಾಜಶೇಖರ್ ಗೆ ಪರ್ಯಾಯವಿಲ್ಲ ಎಂದಿದ್ದಾರೆ.