ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಸಿಐಡಿ ಶುಕ್ರವಾರ ಬಂಧಿಸಿದೆ.
ಪಿಎಸ್ಐ ಪರೀಕ್ಷಾ ಅಕ್ರಮದ ಸಂಬಂಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದರು. ಅವರನ್ನು ಬಂಧಿಸಲು ಸಿಐಡಿ ಶೋಧ ನಡೆಸುತ್ತಿತ್ತು. ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಅಡಗಿದ್ದ ದಿವ್ಯಾ ಹಾಗರಗಿ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಬಂಧಿತ ದಿವ್ಯಾ ಹಾಗರಗಿ ಅವರು ಸೇರಿದಂತೆ ಐವರನ್ನು ಕಲಬುರುಗಿಗೆ ಕರೆತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ದಿವ್ಯಾ ಬಂಧಿತ 18ನೇ ಆರೋಪಿಯಾಗಿದ್ದು ದಿವ್ಯಾ ಅವರ ಪತಿ ರಾಜೇಶ್ ಹಾಗರಗಿ ಅವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ದಿವ್ಯಾ ಅವರು ಕಲಬುರಗಿಯಲ್ಲಿ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಮತ್ತು ಕಲಬುರಗಿಯಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಘಟನೆ ಬೆಳಕಿಗೆ ಬಂದ ನಂತರ ಬಿಜೆಪಿ ಆಕೆಗೆ ಸಂಬಂಧವಿಲ್ಲ ಎಂದು ಆಕೆಯಿಂದ ಅಂತರವನ್ನು ಕಾಪಾಡಿಕೊಂಡಿತ್ತು.
ದಿವ್ಯಾ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಹಲವು ಸ್ಥಾನಗಳನ್ನು ಹೊಂದಿದ್ದರು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಫೆಬ್ರವರಿಯಲ್ಲಿ ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ದಿವ್ಯಾ ಅವರನ್ನು ಭೇಟಿ ಮಾಡಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.
ವಿರೇಶ್ ಎಂಬ ಅಭ್ಯರ್ಥಿಯು ನೇಮಕಾತಿ ಪರೀಕ್ಷೆಯಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರ ಗುರುತಿಸಿದ್ದರು 121 ಅಂಕಗಳನ್ನು ಪಡೆದ ಟಾಪರ್ ಆಗಿ ಹೊರಹೊಮ್ಮಿದ್ದರು. ಇದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಇದರೊಂದಿಗೆ ದಿವ್ಯಾ ಹೆಸರು ತಳುಕು ಹಾಕಿಕೊಂಡಿದೆ.
ದಿವ್ಯಾ ಅವರಿಗೆ ಸೇರಿದ ಜ್ಞಾನ ಜ್ಯೋತಿ ಸಂಸ್ಥೆಯಲ್ಲಿ ವಿರೇಶ್ ಪರೀಕ್ಷೆ ಬರೆದಿದ್ದು, 7ನೇ ರ್ಯಾಂಕ್ ಪಡೆದಿದ್ದರು. ಹೀಗಾಗಿ ತನಿಖೆ ವೇಳೆ ಪರೀಕ್ಷಾ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ದಿವ್ಯಾ ಅವರ ಸಂಸ್ಥೇಯಲ್ಲಿ ಹಲವಾರು ಅಭ್ಯರ್ಥಿಗಳು ದುಷ್ಕೃತ್ಯದಲ್ಲಿ ತೊಡಗಿದ್ದರು ಎಂಬ ಮಾಹಿತಿ ಇದೆ.
ವಾಸ್ತವವಾಗಿ ಸ್ಥಳೀಯ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಸಂಸ್ಥೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪರೀಕ್ಷೆಗಳನ್ನು ನಡೆಸದಂತೆ ಶಿಫಾರಸು ಮಾಡಿದ್ದರು. ಆದರೆ ಪೊಲೀಸ್ ನೇಮಕಾತಿ ವಿಭಾಗವು ಅದೇ ಕೇಂದ್ರವನ್ನು ಆಯ್ಕೆ ಮಾಡಿತ್ತು. ಅಕ್ಟೋಬರ್ ನಲ್ಲಿ ನಡೆದ ಪಿಎಸ್ಐ ಪರೀಕ್ಷೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.


