ಕೇಂದ್ರ ಸರ್ಕಾರ ತೆಲಂಗಾಣ ರೈತರಿಂದ ಭತ್ತ ಖರೀದಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪ್ರಧಾನಿ ಮೋದಿ ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದಾರೆ.
ದೆಹಲಿಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಸಂಸದರು, ಶಾಸಕರು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾದ ಅವರು, ತನ್ನ ರಾಜ್ಯದ ರೈತರಿಂದ ಭತ್ತ ಖರೀದಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ, ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೈಮುಗಿದು ಹೇಳುತ್ತೇನೆ. ದಯವಿಟ್ಟು ನಮ್ಮ ಆಹಾರ ಧಾನ್ಯಗಳನ್ನು ಖರೀಸಿ. ನಾನು ನಿಮಗೆ 24 ಗಂಟೆಗಳ ಕಾಲಾವಕಾಶ ನೀಡುತ್ತೇನೆ. ಈ ಅವಧಿಯೊಳಗೆ ಭತ್ತ ಖರೀದಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ತೆಲಂಗಾಣ ತನ್ನ ಹಕ್ಕನ್ನು ಕೇಳುತ್ತದೆ. ಹೊಸ ಕೃಷಿ ನೀತಿಯನ್ನು ರೂಪಿಸಲು ನಾನು ಪ್ರಧಾನಿಯವರಿಗೆ ಹೇಳಲು ಬಯಸುತ್ತೇನೆ. ಅದಕ್ಕೆ ನಾವು ಕೊಡುಗೆ ನೀಡುತ್ತೇವೆ. ನೀವು ಅದನ್ನು ಮಾಡದಿದ್ದರೆ ರೈತರು ನಿಮ್ಮನ್ನು ತೆಗೆದುಹಾಕುತ್ತಾರೆ. ಹೊಸ ಸರ್ಕಾರವು ಸಮಗ್ರ ಹೊಸ ಕೃಷಿ ನೀತಿ ರೂಪಿಸುತ್ತದೆ ಎಂದರು.
ಪ್ರಧಾನಿಗಳೇ ಸರ್ಕಾರವನ್ನು ಉರುಳಿಸುವ ಶಕ್ತಿ ರೈತರಿಗೆ ಇದೆ. ಅವರ ಭಾವನೆಗಳೊಂದಿಗೆ ಆಟವಾಡಬೇಡಿ. ರೈತರು ಭಿಕ್ಷುಕರಲ್ಲ ಎಂದು ತಿಳಿಸಿದರು.
ತೆಲಂಗಾಣ ರಾಷ್ಟ್ರ ಸಮಿತಿ ನಾಯಕರು ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರ ದೇಶದ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸಿದ್ದು ರಾಜ್ಯದಿಂದ 15 ಲಕ್ಷ ಟನ್ ಗಳಷ್ಟು ಅಕ್ಕಿಯನ್ನು ಖರೀದಿಸಬೇಕೆಂದು ಆಗ್ರಹಿಸಿದರು.
2014ರಲ್ಲಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿಯಲ್ಲಿ ಟಿಆರ್.ಎಸ್ ಪಕ್ಷದ ಮೊದಲ ಪ್ರತಿಭಟನಾ ರ್ಯಾಲಿ ಇದಾಗಿದೆ. ರೈತರಿಂದ ಉತ್ಪನ್ನಗಳನ್ನು ಖರೀಸುವ ಕುರಿತು ತೆಲಂಗಾಣದಲ್ಲಿ ಒತ್ತಡ ಹೆಚ್ಚುತ್ತಿದೆ.
ಪಕ್ಷದ ಸಂಸದರು, ಶಾಸಕರು, ಎಲ್ಲಾ ಕ್ಯಾಬಿನೆಟ್ ಸಚಿವರು ಮತ್ತು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ದೆಹಲಿಯ ತೆಲಂಗಾಣ ಭವನದಲ್ಲಿ ಧರಣಿ ಕುಳಿತಿದ್ದಾರೆ.
ಪ್ರಸಕ್ತ ಬೆಳೆ ಹಂಗಾಮಿನಲ್ಲಿ ಬೇಯಿಸಿದ ಅಕ್ಕಿಯನ್ನು ಖರೀದಿಸಲು ತೆಲಂಗಾಣದ ಮನವಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದ ನಂತರ ಟಿಆರ್.ಎಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆ.
ತೆಲಂಗಾಣ ಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ರಾಷ್ಟ್ರ-ಒಂದು ಸಂಗ್ರಹಣೆ ನೀತಿ ಮತ್ತು ರೈತರ ಹಿತಾಸಕ್ತಿಗಳನ್ನು ರಕ್ಷಿಸಿ ಎಂಬ ಘೋಷಣೆಗಳೊಂದಿಗೆ ಭಿತ್ತಿ ಪತ್ರಗಳನ್ನು ಪೋಸ್ಟರ್ ಗಳನ್ನು ಹಾಕಲಾಗಿದೆ.