ಸಂಪಾದನೆ ಮತ್ತು ಸಂವೇದನೆ ಎರಡನ್ನು ಸಮತೋಲನದಲ್ಲಿ ಇಟ್ಟುಕೊಂಡಿರುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಡಾ.ಜಿ.ಪರಮೇಶ್ವರ್ ಒಬ್ಬರು. ಅವರು ರಾಜ್ಯದಲ್ಲಿರುವ ಎಡಬಲಗಳ ನಡುವಿನ ಕಂದಕವನ್ನು ತುಂಬುವ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ನಾಡೋಜ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದಿಂದ ಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸವ್ಯಸಾಚಿ ಗೌರವ ಗ್ರಂಧ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಎಡ-ಬಲ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನೇ ದೊಡ್ಡದು ಮಾಡುವ ಮೂಲಕ ಮತ್ತಷ್ಟು ಹದಗೆಡಿಸುವ ಕೆಲಸ ಮಾಡುತ್ತಿದ್ದು, ಇದನ್ನು ಸರಿಪರಿಸುವ ಜವಾಬ್ದಾರಿ ಡಾ.ಜಿ.ಪರಮೇಶ್ವರ್ ಅವ ಮೇಲಿದೆ ಎಂದು ಹೇಳಿದರು.
ಇಂದಿನ ಕೆಲ ರಾಜಕಾರಣಿಗಳು ಒರಟು ಮಾತುಗಳನ್ನಾಡುವುದೇ ನಾಯಕತ್ವದ ಗುಣ ಎಂದುಕೊಂಡಿದ್ದಾರೆ. ಆದರೆ ಪರಮೇಶ್ವರ್ ಇಂತಹ ಕೆಲಸವನ್ನು ಎಂದಿಗೂ ಮಾಡಿಲ್ಲ. ನಾಗರ ನಾಲಿಗೆ, ಕಿವುಡು ಕಿವಿಗಳಿರುವ ರಾಜಕಾರಣಿಗಳ ನಡುವೆ ಯಾರೊಬ್ಬರ ಬಗ್ಗೆಯೂ ಹಗುರವಾಗಿ ಮಾತನಾಡಿದವರಲ್ಲ. ಎಲ್ಲವನ್ನು ಸಮಚಿತ್ತದಿಂದ ಕೇಳಿಸಿಕೊಳ್ಳುವ ಅಪರೂಪದ ಜನನಾಯಕ. ನಿಷ್ಟುರತೆ ಜೊತೆಗೆ ವಿವೇಚನೆಯನ್ನು ಬೆಳೆಸಿಕೊಂಡಿರುವ ಅಪರೂಪದ ರಾಜಕಾರಣಿ ಎಂದು ಬರಗೂರು ಹೇಳಿದರು.
ಗಾಂಧಿ ಮತ್ತು ಅಂಬೇಡ್ಕರ್, ನೆಹರು ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯಗಳು ಇದ್ದುವೇ ಹೊರತು ಅವರು ಎಂದಿಗೂ ದ್ವೇಷ ಸಾಧಿಸಿದವರಲ್ಲ. ಆದರೆ ಈಚೆಗೆ ನಾಯಕನಿಗೆ ಪ್ರತಿನಾಯಕನನ್ನು ಸೃಷ್ಟಿಸುವ ಕೆಲಸ ಬಹಳ ವೇಗ ಪಡೆದುಕೊಂಡಿದೆ. ಖಳನಾಯಕ ಹುಸಿ ಬೌದ್ದಿಕ ಕಾರ್ಖಾನೆಗಳು ಆಗುತ್ತಿವೆ. ಧರ್ಮ, ಸಂಸ್ಕೃತಿ, ವ್ಯಕ್ತಿ ಅಪಖ್ಯಾನವಾಗುತ್ತಿದೆ. ಕುರ್ಚಿಯಲ್ಲಿ ಕೂರುವವರು ಎತ್ತರದಲ್ಲಿರಬೇಕು. ಆಗ ಮಾತ್ರ ಪ್ರಜಾಸತ್ತಾತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ ಎಂದು ವಿಶ್ಲೇಷಿಸಿದರು.