ಪಾವಗಡ ತಾಲ್ಲೂಕು ಪಳವಳ್ಳಿ ಕೆರೆಏರಿ ಬಳಿ ಬಸ್ ಪಲ್ಟಿಯಾಗಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ ಹಾಗೂ ಬಸ್ ದುರಂತರದಲ್ಲಿ ಗಾಯಾಳುಗಳಾಗಿ ಅಂಗಾಂಗ ಕಳೆದುಕೊಂಡವರಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಎನ್ಎಸ್.ಯುಐ ಕಾರ್ಯಕರ್ತರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಾರ್ಚ್ 18ರಂದು ಖಾಸಗಿ ಬಸ್ ಅಪಘಾತವಾಗಿದೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡು ಜಿಲ್ಲಾಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಸ್ ದುರಂತ ಸಂಭವಿಸಲು ಸರ್ಕಾರದ ವೈಫಲ್ಯವೇ ಕಾರಣವಾಗಿದೆ. ಅಪಘಾತವಾದ ದಿನ ವೈ.ಎನ್.ಹೊಸಕೋಟೆ-ಪಾವಗಡ ಮಾರ್ಗದಲ್ಲಿ ಸಂಚರಿಸಬೇಕಿದ್ದ ಮೂರು ಬಸ್ ಗಳು ಸಹ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ತೊಂದರೆಯಾಗಿದೆ. ಅಷ್ಟೇ ಆ ಮಾರ್ಗದಲ್ಲಿ ಬರುವ ಜನರೂ ಕೂಡ ತಡವಾಗಿ ಬಂದ ಖಾಸಗಿ ಬಸ್ ನಲ್ಲೇ ಪ್ರಯಾಣ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಮೂರು ಬಸ್ ಗಳು ಬಂದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಹಾಗಾಗಿ ಬಂದ ಒಂದು ಬಸ್ ನಲ್ಲೇ ಸಾಕಷ್ಟು ಮಂದಿ ಪಾವಗಡಕ್ಕೆ ಬರಲು ಹೊರಟಿದ್ದಾರೆ. ಬಸ್ ಒಂದೇ ಆದ ಕಾರಣ ಬಸ್ ಮೇಲೆಯೂ ಕುಳಿತುಕೊಂಡಿದ್ದಾರೆ. ಇದು ತಪ್ಪು ಆದರೂ, ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೆ 25 ಲಕ್ಷ ರೂ ಮತ್ತು ಅಪಘಾತದಲ್ಲಿ ಕಣ್ಣು, ಕಾಲು, ಕೈ ಸೇರಿ ಇತರೆ ಅಂಗಾಂಗಗಳನ್ನು ಕಳೆದುಕೊಂಡು ಸಮಸ್ಯೆ ಎದುರಿಸುತ್ತಿರುವವರಿಗೆ 20 ಲಕ್ಷ ಪರಿಹಾರ ನೀಡಬೇಕು ಎಂದು ಎನ್ಎಸ್.ಯುಐ ಒತ್ತಾಯಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಜೀವನ ಚಿಂತಾಜನಕವಾಗಿದೆ. ಮುಂದೆ ಅವರು ಸಂಪೂರ್ಣ ವಿಕಲಚೇತನ ಜೀವನ ಸಾಗಿಸಬೇಕಿದೆ. ಆದ್ದರಿಂದ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎನ್ಎಸ್.ಯುಐ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.