ಸ್ಕ್ರ್ಯಾಪ್ ಗೋಡೌನ್ ಗೆ ಬೆಂಕಿ ಹೊತ್ತಿಕೊಂಡು ಹನ್ನೊಂದು ಮಂದಿ ಬಿಹಾರಿ ಕಾರ್ಮಿಕರು ಸುಟ್ಟು ಕರಕಲಾಗಿರುವ ಘಟನೆ ಹೈದರಾಬಾದ್ ನ ಭೋಯಿಗುಡಾದಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಬಿಹಾರದ ಛಾಪ್ರಾದಿಂದ ವಲಸೆ ಬಂದಿದ್ದ 12 ಮಂದಿ ಕಾರ್ಮಿಕರು ಶಾದ್ವಾನ್ ವ್ಯಾಪಾರಿಗಳ ಸ್ಕ್ರ್ಯಾಪ್ ಸಂಗ್ರಹ ಕೇಂದ್ರದ ಮೊದಲ ಮಹಡಿಯಲ್ಲಿ ಮಲಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಬಗ್ಗೆ ಮುಂಜಾನೆ 3 ಗಂಟೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕೆ ಬಂದರೂ ಬೆಂಕಿ ನಿಯಂತ್ರಿಸಲು ಮೂರು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ತಿಳಿದು ಬಂದಿದೆ.
ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿಕೊಂಡು ಧಗಧಗನೆ ಉರಿದಿದ್ದರಿಂದ ಹೊಗೆ ಕವಿದುಕೊಂಡಿತು. ಮೊದಲ ಮಹಡಿಯಲ್ಲಿ ಮಲಗಿದ್ದವರು ಇಳಿದು ಬರಲು ಸಾಧ್ಯವಾಗಲಿಲ್ಲ. ನೆಲ ಮಹಡಿಯಲ್ಲಿನ ಏಕೈಕ ಮಾರ್ಗವನ್ನು ಮುಚ್ಚಲಾಗಿತ್ತು. ಹೀಗಾಗಿ ಕೆಲ ಕಾರ್ಮಿಕರು ಅಲ್ಲಿಂದ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಸ್ಕ್ರ್ಯಾಪ್ ಗೋಡೌನ್ ನಲ್ಲಿ ಖಾಲಿ ಮದ್ಯದ ಬಾಟಲಿಗಳು, ಕಾಗದ, ಪ್ಲಾಸ್ಟಿಟ್, ಕೇಬಲ್ ಇದ್ದವು. ಮೊದಲ ಮಹಡಿಯನ್ನು ಸುರುಳಿಯಾಕಾರದ ಲೋಹದ ಮೆಟ್ಟಿಲುಗಳ ಮೂಲಕ ನೆಲ ಮಹಡಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಕೊಠಡಿಯ ಬಾಗಿಲಿಗೆ ಬೀಗ ಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಕಾರ್ಮಿಕರು ಈ ಗೋಡೌನ್ ನಲ್ಲಿ ವಾಸಿಸುತ್ತಿದ್ದಾರೆಂದು ಯಾರಿಗೂ ತಿಳಿದಿರಲಿಲ್ಲ. ಮಾಲಿಕರು ಅವರಿಗೆ ಸ್ಕ್ರ್ಯಾಪ್ ಗೋಡೌನ್ ಮೊದಲ ಮಹಡಿಯಲ್ಲಿ ವಸತಿ ಒದಗಿಸಿದ್ದಾರೆಂದು ಹೇಳಲಾಗುತ್ತಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಸಂತ್ರಸ್ತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಮೃತ ದೇಹಗಳನ್ನು ಬಿಹಾರಕ್ಕೆ ರವಾನಿಸುವಂತೆ ಸೂಚನೆ ನೀಡಿದ್ದಾರೆ. ಬೆಂಕಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.