ಕೋವಿಡ್ 3ನೇ ಅಲೆ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಮೇಕೆದಾಟು ಯೋಜನೆ ಆಗ್ರಹಿಸುವ ಪಾದಯಾತ್ರೆ ಫೆಬ್ರವರಿ 27 ರಿಂದ ರಾಮನಗರದಿಂದ ಮತ್ತೆ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಮತ್ತೆ ಆರಂಭವಾಗುತ್ತಿದೆ. ಫೆ.28ರಂದು ಬಿಡದಿಯಿಂದ ಬೆಂಗಳೂರಿಗೆ ಬರಲಾಗುವುದು ಎಂದರು.
ಬೆಂಗಳೂರಿನ 1.5 ಕೋಟಿ ಜನರ ಪೈಕಿ ಕೇವಲ ಶೇಕಡ 30-40ರಷ್ಟು ಜನರಿಗೆ ಮಾತ್ರ ಕಾವೇರಿ ನೀರು ಕುಡಿಯಲು ಸಿಗುತ್ತಿದೆ. ಉಳಿದ ಶೇ.60-70 ರಷ್ಟು ಜನರಿಗೆ ಕುಡಿಯಲು ಕಾವೇರಿ ನೀರು ಸಿಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಅದು ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಎಂದು ಹೇಳಿದರು.
ಮೇಕೆದಾಟು ಯೋಜನೆಯಿಂದ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಕುಡಿಯುವ ನೀರು ಪೂರೈಕೆ ಮಾಡಲು ಅನುಕೂಲವಾಗಲಿದೆ. ಈ ಯೋಜನೆಯಿಂದ 2.5 ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಜತೆಗೆ ಈ ಯೋಜನೆಯಿಂದ 400 ಮೇ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ ಎಂದರು.
ನಾವು ರಾಜ್ಯದ ನೆಲ, ಜಲ, ಭಾಷೆ ವಿಚಾರ ಬಂದಾಗ ಎಲ್ಲ ಪಕ್ಷದ ನಾಯಕರನ್ನು ಕರೆದು ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಇವರು ಬೇರೆ ಪಕ್ಷದವರನ್ನು ಪರಿಗಣಿಸುತ್ತಿಲ್ಲ. ಬಿಜೆಪಿ ಸಂಸದರು ಸಂಸತ್ತಿನಲ್ಲೂ ರಾಜ್ಯದ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ. ಮೋದಿ ಅವರಿಗೆ ನಮಸ್ಕಾರ ಹಾಕಿ ಬರುತ್ತಿದ್ದಾರೆ ಅಷ್ಟೇ ಎಂದರು.
ಈ ಪಾದಯಾತ್ರೆಯಲ್ಲಿ ಹೆಚ್ಚಿನ ಜನ ಭಾಗವಹಿಸಬೇಕು. ಈ ಮೂರು ದಿನಗಳಲ್ಲಿ ವಾಹನ ಸಂಚಾರ ದಟ್ಟಣೆ ತೊಂದರೆ ಆಗಬಹುದು. ನಾವು ಈ ಹೋರಾಟವನ್ನು ಜನರ ಹಿತಕ್ಕಾಗಿ ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಒಂದು ರೂಪಾಯಿ ಕೆಲಸ ಮಾಡಿದರೆ 10 ಪೈಸೆ ಪ್ರಚಾರ ಪಡೆಯುತ್ತೇವೆ, ಆದರೆ ಬಿಜೆಪಿ ಅವರು 10 ಪೈಸೆ ಕೆಲಸ ಮಾಡಿ ಒಂದು ರೂಪಾಯಿಯಷ್ಟು ಪ್ರಚಾರ ಪಡೆಯುತ್ತಾರೆ. ಮೋದಿ ಅವರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರೂ ಹೀಗೆ ಮಾಡುತ್ತಾರೆ ಎಂದು ಹೇಳಿದರು.