ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ ಎಂದು ನಾನು ನನ್ನ ಗೌರವವೆಂದು ಪರಿಗಣಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರೊಂದಿಗೆ ನನ್ನ ಸಂವಾದಗಳು ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ನನ್ನ ಸಂತಾಪಗಳು ಆಕೆಯ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ ಎಂದರು.
ಲತಾ ದೀದಿ ಅವರ ಹಾಡುಗಳು ವಿವಿಧ ಭಾವನೆಗಳನ್ನು ತಂದವು. ದಶಕಗಳ ಕಾಲ ಭಾರತೀಯ ಚಲನಚಿತ್ರ ಪ್ರಪಂಚದ ಸ್ಥಿತ್ಯಂತರಗಳನ್ನು ಅವರು ನಿಕಟವಾಗಿ ವೀಕ್ಷಿಸಿದರು. ಚಲನಚಿತ್ರಗಳ ಆಚೆಗೆ, ಅವರು ಯಾವಾಗಲೂ ಭಾರತದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು. ಅವರು ಯಾವಾಗಲೂ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸಿದ್ದರು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
ಅಳಿಸಲಾಗದ ದನಿ:
ಎಐಸಿಸಿ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಲತಾ ಮಂಗೇಶ್ಕರ್ ಅವರದ್ದು ಸುವರ್ಣ ದನಿಯಾಗಿದ್ದು ಅದನ್ನು ಅಳಿಸಲು ಸಾಧ್ಯವಿಲ್ಲ. ಕೋಟ್ಯಂತರ ಮಂದಿ ಬೆಂಬಲಿಗರ ಹೃದಯಲ್ಲಿ ಲತಾ ಮಂಗೇಶ್ಕರ್ ನೆಲೆಸಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ ಗಾನಕೋಗಿಲೆ ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ. ನಮ್ಮನ್ನು ಅಗಲಿ ಹೋದರೂ ಅಮರ ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಆಗಲಿಕೆಯನ್ನು ಭರಿಸುವ ಶಕ್ತಿಯನ್ನು ಕುಟುಂಬದವರು, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಆರೋಗ್ಯವಾಗಿ ಮನೆಗೆ ಮರಳುತ್ತಾರೆ ಎನ್ನುವ ಸಮಸ್ತ ಭಾರತೀಯರ ನಿರೀಕ್ಷೆಯನ್ನು ಹುಸಿ ಮಾಡಿ ಭಾರತವನ್ನು ಮೌನವಾಗಿಸಿ ತಮ್ಮ ಪಯಣ ಮುಗಿಸಿದ್ದಾರೆ. ಆದರೆ, ಅವರು ಸ್ವರ ತುಂಬಿದ ಸಾವಿರಾರು ಅನರ್ಘ್ಯ ಗೀತೆಗಳ ರೂಪದಲ್ಲಿ ನಮ್ಮ ನಡುವೆ ಅಜರಾಮರವಾಗಿರಲಿವೆ ಎಂದು ಹೇಳಿದರು.
ಭಾರತದ ಹೃದಯಗೀತೆ, ಸಪ್ತಸ್ವರಗಳ ಸಾಮ್ರಾಜ್ಞಿ ಆಗಿದ್ದ ಪ್ರಖ್ಯಾತ ಗಾಯಕರು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


