ಕನ್ನಡದ ಕಬೀರ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಫೆಬ್ರವರಿ 5ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ ಅವರು 12ನೇ ಶತಮಾನದ ಬಸವಣ್ಣನ ಅನುಯಾಯಿ ಆಗಿದ್ದರು. ಪ್ರವಚನಕ್ಕೆ ನಿಂತರೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಬಸವಣ್ಣನ ವಚನಗಳ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಅವರು ವಚನಗಳನ್ನು ಉಲ್ಲೇಖಿಸಿ ಪ್ರವಚನ ನೀಡುತ್ತಿದ್ದರು.
1940ರಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಬಡಕುಟುಂಬದಲ್ಲಿ ಜನಿಸಿದ ಸುತಾರ್ 3ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು.
1970ರಲ್ಲಿ ಅವರು ಸಾಮರಸ್ಯ ಜಾನಪದ ಸಂಗೀತ ಮೇಳವನ್ನು ಸ್ಥಾಪಿಸಿದ ಕೀರ್ತಿ ಇಬ್ರಾಹಿಂದ ಅವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲ ಕರ್ನಾಟಕ ಮತ್ತು ಪಕ್ಕದ ರಾಜ್ಯಗಳಾದ್ಯಂತ ಭಕ್ತಿ ಗಾಯನ, ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಇಬ್ರಾಹಿಂ ಸುತಾರ್ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಭಾವೈಕ್ಯತೆಯ ಕೊಂಡಿ – ಸಿದ್ದರಾಮಯ್ಯ
‘ಕನ್ನಡದ ಕಬೀರ’ರೆಂದೇ ಖ್ಯಾತಿ ಪಡೆದಿದ್ದ ಜನಪರ ಪ್ರವಚನಕಾರ ಇಬ್ರಾಹಿ ಸುತಾರ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಜಾತಿ-ಧರ್ಮಗಳ ಹೆಸರಲ್ಲಿ ಮನಸ್ಸುಗಳನ್ನು ಒಡೆಯಲಾಗುತ್ತಿರುವ ದಿನಗಳಲ್ಲಿ ಪ್ರವಚನಕಾರ ಸುತಾರ ಅವರು ಭಾವೈಕ್ಯದ ಕೊಂಡಿಯಾಗಿದ್ದರು. ಅವರ ಸಾವು ತುಂಬಿ ಬಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಕೋರುವೆ ಎಂದು ಹೇಳಿದ್ದಾರೆ.
ಸಾಮರಸ್ಯದ ಕೊಂಡಿ – ಎಚ್.ಡಿ.ಕೆ
ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ.