ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣದ ಮೂಲಕ ಪ್ರಚೋದನಕಾರಿ ಮತ್ತು ವಿಭಜಕ ಹೇಳಿಕೆ ನೀಡಿರುವ ಎಲ್ಲರಿಗೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ಆರ್.ಎಸ್.ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ಇಂದ್ರೇಶ್ ನೀಡಿರುವ ಸಂದರ್ಶನವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ್ದು, ದ್ವೇಷದ ರಾಜಕೀಯ ಭ್ರಷ್ಟಾಚಾರಕ್ಕೆ ಸಮ ಎಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರು ದ್ವೇಷ ಪ್ರಚೋದನೆಯಲ್ಲಿ ತೊಡಗಿದ್ದು ಒಂದು ವರ್ಗವನ್ನು ಎತ್ತಿಕಟ್ಟುವುದನ್ನ ತಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಯಾವುದೇ ಸಮುದಾಯ, ಜಾತಿ, ಗುಂಪಿನ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವ ಬದಲು ದೇಶ ಮತ್ತು ಜನರ ಹಿತದೃಷ್ಟಿಯಿಂದ ಸಹೋದರತೆ ಮತ್ತು ಅಭಿವೃದ್ಧಿಯ ರಾಜಕಾರಣ ಅಭ್ಯಾಸ ಮಾಡಬೇಕು ಎಂದು ಇಂದ್ರೇಶ್ ಹೇಳಿದ್ದಾರೆ.
ಯಾವುದೇ ರೀತಿಯ ದ್ವೇಷದ ಭಾಷಣಗಳು ಖಂಡನೀಯ. ಎಲ್ಲಾ ದ್ವೇಷದ ಭಾಷಣಗಳನ್ನು ಕಾನೂನಿನ ಪ್ರಕಾರ ಖಂಡಿಸಬೇಕು ಮತ್ತು ಶಿಕ್ಷಿಸಬೇಕು. ಯಾರನ್ನೂ ವಿನಾಯಿತಿ ಎಂದು ಪರಿಗಣಿಸಬಾರದು ಎಂದು ತಿಳಿಸಿದರು.
ದ್ವೇಷದ ಭಾಷಣದ ಮೂಲಕ ದೇಶದ ವಾತಾವರಣವನ್ನು ಹಾಳು ಮಾಡುವ ಇಂತಹ ವಿಭಜಕ ಶಕ್ತಿಯ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.