ಇತ್ತೀಚೆಗೆ ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು ಎಂಬ ಪಾದಯಾತ್ರೆ ಮಾಡಿದೆವು. ನಮಗೆ ಪಾದಯಾತ್ರೆ, ಹೋರಾಟವನ್ನು ಹೇಳಿಕೊಟ್ಟವರು ಯಾರು? ಅದೇ ಮಹಾತ್ಮ ಗಾಂಧೀಜಿ. ಕಾಂಗ್ರೆಸಿಗರು ಮಾತ್ರ ಇದರ ಬಗ್ಗೆ ಯೋಚಿಸಲು ಸಾಧ್ಯ ಎಂದು ಪ್ರತಿಪಕ್ಷ ನಾಯಕ ಡಿ.ಕೆ.ಶಿವಕುಮಾರ್ ಹೇಳಿದರು.
ನಾವು ಲಾಠಿ, ಬಂದೂಕು ಹಿಡಿದುಕೊಂಡು ಬೇರೆಯವರ ಮೇಲೆ ಯುದ್ಧ ಮಾಡಲು ಹೋಗಿರಲಿಲ್ಲ. ಗಾಂಧೀಜಿ ಹೇಳಿಕೊಟ್ಟ ನಡಿಗೆ, ಮಾರ್ಗದರ್ಶನ ಪಾಲನೆ ಮಾಡುತ್ತಿದ್ದೇವೆ. ಆದರೆ ಇದನ್ನು ಕೆಲವರು ಒಪ್ಪಲು ತಯಾರಿಲ್ಲ ಎಂದು ತಿಳಿಸಿದರು.
ನಮ್ಮ ಹೋರಾಟ ಹಿಂಸೆ ಮಾರ್ಗದಲ್ಲಿ ಹೋಗಬಾರದು ಎಂಬ ಕಾರಣಕ್ಕೆ ನಾವು ಗಾಂಧೀಜಿ ಪ್ರತಿಮೆ ಮುಂದೆ ಹೋರಾಟ ಮಾಡುತ್ತೇವೆ. ಈ ದೇಶಕ್ಕೆ, ಪ್ರಪಂಚಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ ಎಂದರು.
ನಾವು ಅವರ ಮಾರ್ಗರ್ಶನ ಒಪ್ಪಿದ್ದೇವೆ. ಕಾಂಗ್ರೆಸಿಗರಾಗಿ ಅವರ ಹಾಗೂ ಅವರ ಜತೆಗಿನ ಗಣ್ಯರ ನಾಯಕತ್ವವೇ ನಮಗಿರುವ ಶಕ್ತಿ. ಅವರ ಆದರ್ಶ, ಮಾರ್ಗದರ್ಶನ, ಆಲೋಚನೆ, ಸತ್ಯ ಮತ್ತು ಕಾಯಕದ ಮೇಲೆ ನಂಬಿಕೆ ಇಟ್ಟು ನಾವು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಬೇರೆಯವರ ವಿಶ್ವಾಸ ಹೇಗೆ ಗಳಿಸಬೇಕು ಎಂಬುದಕ್ಕೆ ಗಾಂಧಿಜೀ ಅವರು ‘ನೀನು ನಿನ್ನನ್ನು ಗೆಲ್ಲಬೇಕಾದರೆ, ನಿನ್ನ ಮಿದುಳು ಪ್ರಯೋಗಿಸು, ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯ ಪ್ರಯೋಗಿಸು ಎಂದು ಹೇಳಿದ್ದಾರೆ. ಇದು ಗಾಂಧೀಜಿ ಅವರು ನಮಗೆ ಕೊಟ್ಟ ಮಾರ್ಗದರ್ಶನ ಎಂದು ತಿಳಿಸಿದರು.
ವಿವಿಧ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ದೇಶದಲ್ಲಿ ಈಗ ತುರ್ತುಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ನಾವು ಅಹಿಂಸೆ ಮಾರ್ಗದಲ್ಲಿ ಹೋರಾಡಬೇಕು. ರೈತರು ಗಾಂಧೀಜಿ ಅವರ ತತ್ವದಂತೆ ಅಹಿಂಸೆ ಮಾರ್ಗದ ಮೂಲಕ ಸತ್ಯಾಗ್ರಹ ಮಾಡಿ ಪ್ರಧಾನಿಗಳು ಕರಾಳ ಕಾಯ್ದೆಗಳನ್ನು ಹಿಂಪಡೆದು ಕೈಮುಗಿದು ಕ್ಷಮೆ ಕೇಳುವಂತೆ ಮಾಡಿದ್ದಾರೆ ಎಂದರು.
ಅಧಿಕಾರ, ಮತ, ದರ್ಪ ಇದ್ಯಾವುದೂ ಹೋರಾಟದ ಮುಂದೆ ಶಾಶ್ವತವಲ್ಲ. ಹೀಗಾಗಿ ನಾವು ನೀವೆಲ್ಲ ಅವರ ಮಾರ್ಗದರ್ಶನ ಅಳವಡಿಸಿಕೊಂಡು ದೇಶದ ಐಕ್ಯತೆ, ಸಮಗ್ರತೆ ಕಾಯ್ದುಕೊಂಡು ದೇಶವನ್ನು ಅಭಿವೃದ್ಧಿಶೀಲ ಮಾಡಬೇಕಿದೆ ಎಂದು ತಿಳಿಸಿದರು.
ಗಾಂಧೀಜಿ ಅವರನ್ನು ಕಳೆದುಕೊಂಡು ಹುತಾತ್ಮರ ದಿನ ಆಚರಿಸುತ್ತಿದ್ದೇವೆ. ಇಡೀ ದೇಶದೆಲ್ಲೆಡೆ ಮೌನಾಚಾರಣೆ ಮಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿಕೊಂಡು ಬಂದಿದ್ದೇವೆ ಎಂದು ವಿವರಿಸಿದರು.


