ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ರೂಪಾಂತರ ಕೊವಿಡ್ ಪ್ರಕರಣಗಳ ಉಲ್ಬಣದಿಂದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ದೆಹಲಿಯಲ್ಲಿ ವಾರಾಂತ್ಯ ಕರ್ಪ್ಯೂ ವಿಧಿಸಲು ತೀರ್ಮಾನಿಸಿದೆ. ಹಾಗೆಯೇ ಪಂಜಾಬ್ ನಲ್ಲಿ ರಾತ್ರಿ ಕರ್ಪ್ಯೂ ಹೇರಲಾಗಿದೆ.
ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಶೇ.50ರಷ್ಟು ಸಾಮರ್ಥ್ಯದೊಂದಿಗೆ ಖಾಸಗಿ ಕಚೇರಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಕೊರೊನಾ ವೈರಸ್ ನ ಒಮಿಕ್ರಾನ್ ರೂಪಾಂತರ ಸೋಂಕು ಉಲ್ಬಣ ರಾಜಧಾನಿ ಯಲ್ಲಿ ಕಡಿಮೆ ಪ್ರಮಾಣದಲ್ಲಿ ಇದೆ. ಆದರೂ ಹಾಸಿಗೆಯನ್ನು ಹೆಚ್ಚಿಸಿ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಪಂಜಾಬ್ ಸರ್ಕಾರ ಕೊವಿಡ್ ಪ್ರಕರಣಗಳ ಉಲ್ಬಣದ ಹಿನ್ನೆಲೆಯಲ್ಲಿ ಜನವರಿ 4 ರಿಂದ 15ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ವಿಧಿಸಿದೆ.
ಕೊವಿಡ್ ನಿಯಂತ್ರಿಸಲು ಕೆಲಸದ ಸ್ಥಳಗಳು ಸೇರಿ ಸಾರ್ವಜನಿಕವಾಗಿ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪಂಜಾಬ್ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ ಆದೇಶ ಹೊರಡಿಸಿದ್ದಾರೆ.
ಪಂಜಾಬ್ ನ ನಗರ ಮತ್ತು ಪಟ್ಟಣ, ಪುರಸಭೆ ಮಿತಿಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಅನಿವಾರ್ಯವಲ್ಲದ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ. 144 ಸೆಕ್ಷನ್ ನಿಷೇಧಿತ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನರು ಮತ್ತು ಸರಕು ಸಾಗಣೆ ಕಡಿಮೆ ಮಾಡುವುದು, ಬಸ್, ವಿಮಾನ, ರೈಲು ನಿಲ್ದಾಣದಲ್ಲಿ ಇಳಿದವರು ನೇರ ತಮ್ಮ ಮನೆಗಳಿಗೆ ತಲುಪುವುದಕ್ಕೆ ಅನುಮತಿ ನೀಡಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕೋಚಿಂಗ್ ಸಂಸ್ಥೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಬಾರ್, ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್, ಮಾಲ್, ರೆಸ್ಟೋರೆಂಟ್, ಸ್ಫಾಗಳು, ಮ್ಯೂಸಿಯಂಗಳು, ಮೃಗಾಲಯ ಇತ್ಯಾದಿಗಳಿಗೆ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದೆ. ಎಲ್ಲಾ ಉದ್ಯೋಗಿಗಳು ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ ಮಾಡಿದೆ.
ಎಲ್ಲಾ ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಈಜುಕೊಳ, ಜಿಮ್ ಗಳನ್ನು ಮುಚ್ಚಲಾಗಿದೆ.