ಒಬ್ಬ ಜನಪ್ರತಿನಿಧಿಯಾಗಿ, ಸರ್ಕಾರದ ಅಂಗವಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅತಿಥಿ ಉಪನ್ಯಾಸಕರ ಕುರಿತು ಅವಹೇಳನ ಮಾಡಿರುವುದು ಅವರ ಅಪ್ರಬುದ್ಥತೆ ಮತ್ತು ಬೇಜವಾಬ್ದಾರಿ ನಡವಳಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಖಂಡಿಸಿದ್ದಾರೆ.
ದಿ ನ್ಯೂಸ್ ಕಿಟ್ ಜೊತೆ ಮಾತನಾಡಿದ ಅವರು, ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿರುವುದು ಜವಾಬ್ದಾರಿಯುತ ಸಚಿವರ ಕರ್ತವ್ಯ. ಆದರೆ ಅತಿಥಿ ಉಪನ್ಯಾಸಕರ ಅಹವಾಲುಗಳನ್ನು ಆಲಿಸುವಂತಹ ತಾಳ್ಮೆ ಇಲ್ಲದಿರುವ ಅವರ ನಡವಳಿಕೆ ಆಕ್ಷೇಪಾರ್ಹ ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವರು ಶಿಕ್ಷಣ ಕ್ಷೇತ್ರದಲ್ಲಿರುವ ಲೋಪಗಳನ್ನು ಸರಿಪಡಿಸುವತ್ತ ಗಮನಹರಿಸಬೇಕು. ಆದರೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಅತಿಥಿ ಉಪನ್ಯಾಸಕರ ಮಾತುಗಳನ್ನು ಆಲಿಸದೇ ಹೋಗಿರುವುದು ಸರಿಯಾದ ಕ್ರಮವಲ್ಲ. ಶಿಕ್ಷಣ ವ್ಯವಸ್ಥೆಯೇ ಕುಸಿದು ಹೋಗುತ್ತಿರುವ ಹೊತ್ತಿನಲ್ಲಿ ಸಂವಿಧಾನದ ಎಲ್ಲಾ ಆಶಯಗಳನ್ನು ಈಡೇರಿಸಬೇಕಾದುದು ಸರ್ಕಾರದ ಕರ್ತವ್ಯ ಎಂದು ನೆನಪಿಸಿದರು.
ಪಾಠ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಾಲಕಾಲಕ್ಕೆ ವೇತನ ನೀಡುವ ಜೊತೆಗೆ ಅವರ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಬೇಕಾದುದು ಸರ್ಕಾರ ಮತ್ತು ಶಿಕ್ಷಣ ಸಚಿವರ ಜವಾಬ್ದಾರಿ. ಆದರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಅತಿಥಿ ಉಪನ್ಯಾಸಕರ ಭವಿಷ್ಯ ಅತಂತ್ರವಾಗಿದೆ. ಇದನ್ನು ಸರಿಪಡಿಸಬೇಕಾದುದು ಸರ್ಕಾರ ಕರ್ತವ್ಯ. ಅದು ಬಿಟ್ಟು ಕರ್ತವ್ಯದಿಂದ ಹಿಮ್ಮುಖವಾಗುವುದು ಬೇಜವಾಬ್ದಾರಿತನದ ವರ್ತನೆಯಾಗಿದೆ ಎಂದು ಟೀಕಿಸಿದರು.
ಅತಿಥಿ ಉಪನ್ಯಾಸಕರು ಘನತೆ, ಗೌರವ ಮತ್ತು ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಸರ್ಕಾರ ದಾರಿ ಮಾಡಿಕೊಡಬೇಕು. ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಮಾಡಿ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಮನವಿ ಸಲ್ಲಿಸಲು ಹೋದ ಅತಿಥಿ ಉಪನ್ಯಾಸಕರಿಗೆ, ‘ನಿಮಗೆ ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ಬೇರೆ ಕೆಲಸ ಹುಡುಕಿಕೊಳ್ಳಿ’ ಎಂಬ ಹೇಳಿಕೆಗೆ ಹೋರಾಟಗಾರ ಕೊಟ್ಟ ಶಂಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿರಾಗಲು ನಾಲಾಯಕ್:
ಶಿಕ್ಷಣ ಇಲಾಖೆ ಮತ್ತು ಸರ್ಕಾರ ಸಚಿವರ ಮನೆಯೇನಲ್ಲ? ಅವರು ನಮ್ಮಿಂದ ಆಯ್ಕೆಯಾಗಿ ಹೋದವರು. ಅತಿಥಿ ಉಪನ್ಯಾಸಕರ ಸಮಸ್ಯೆಗೆ ಬಗೆಹರಿಸುವ ಬದಲು ಬೇಜವಾಬ್ದಾರಿಯಿಂದ ನಡೆದುಕೊಂಡಿರುವ ಸಚಿವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಸರಳ, ಸಜ್ಜನ ಎನ್ನುತ್ತೀರಿ. ರೈಲು, ಬಸ್ ನಲ್ಲಿ ಓಡಾಡುವ ಮೂಲಕ ಸರಳತೆ ಇದೆ ಎನ್ನುವಂತೆ ತೋರಿಸಿಕೊಳ್ಳುತ್ತೀರಿ. ಆದರೆ ಮನವಿ ನೀಡಲು ಬಂದವರೊಂದಿಗೆ ಕ್ರೌರ್ಯದಿಂದ ವರ್ತಿಸುತ್ತೀರಿ. ಶಿಕ್ಷಣ ಸಚಿವರಾಗಿ ಈ ಹುದ್ದೆಯಲ್ಲಿರಲು ನಾಲಾಯಕ್ ಎಂದು ಕಿಡಿಕಾರಿದರು.
ಕೊಬ್ಬರಿ ವ್ಯಾಪಾರಿಯಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನಸ್ಸಿನಲ್ಲಿ ಒಬ್ಬ ಫ್ಯೂಡಲ್ ಇರುವುದು ಇದರಿಂದ ಗೊತ್ತಾಗುತ್ತದೆ. ಇದು ಹೆಚ್ಚು ಅಪಾಯಕಾರಿ ಎಂದು ತಿಳಿಸಿದರು.


