ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ದ ಯಾತ್ರಾ ಸ್ಥಳ ವೈಷ್ಣೋದೇವಿ ದೇಗುಲದಲ್ಲಿ ಭಕ್ತರ ಭಾರೀ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 12 ಮಂದಿ ಭಕ್ತರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 20 ಮಂದಿ ಭಕ್ತರು ಗಾಯಗೊಂಡಿದ್ದಾರೆ.
ಜಮ್ಮುವಿನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ತ್ರಿಕೂಟ ಪರ್ವತಗಳ ಮೇಲಿರುವ ಗರ್ಭಗುಡಿಯ ಹೊರಗಿನ ಗೇಟ್ ಸಂಖ್ಯೆ 3ರ ಬಳಿ ಶನಿವಾರ ಮುಂಜಾನೆ ಕಾಲ್ತುಳಿತ ಸಂಭವಿಸಿದ್ದು ಹೊಸ ವರ್ಷದ ಮೊದಲ ದಿನವೇ ದೇವರ ದರ್ಶನಕ್ಕೆ ಹೋಗಿದ್ದಾಗ ದುರಂತ ನಡೆದಿದೆ.
ಭಕ್ತರು ಸಾಮಾನ್ಯವಾಗಿ ಕತ್ರಾ ಬೇಸ್ ಕ್ಯಾಂಪ್ ನಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿರುವ ಪರ್ವತದ ಮೇಲಿನ ದೇಗುಲಕ್ಕೆ ಚಾರಣ ಮಾಡುತ್ತಾರೆ ಮತ್ತು ಕೆಲವರು ಹೆಲಿಕಾಪ್ಟರ್ ಮೂಲಕ ತಲುಪುವರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾತಾ ವೈಷ್ಣೋದೇವಿ ಭವನದಲ್ಲಿ ಕಾಲ್ತುಳಿತದಿಂದ ಪ್ರಾಣಹಾನಿಯಾಗಿರುವುದು ತೀವ್ರ ದುಃಖ ತಂದಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹೇಳಿದ್ದಾರೆ.
ವೈಷ್ಣೋದೇವಿ ಭವನದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡ ಸಂಬಂಧಿಕರಿಗೆ ಪಿಎಂಎನ್ಆರ್.ಎಫ್ ನಿಂತ ತಲಾ 2 ಲಕ್ಷ ರೂಪಾಯಿ ಪರಿಹಾರ, ಗಾಯಗೊಂಡವರಿಗೆ 50 ಸಾವಿರ ರೂ ನೀಡಲಾಗುವುದು ಎಂದು ಪ್ರಧಾನಿ ಕಚೇರಿ ಟ್ವೀಟ್ ನಲ್ಲಿ ತಿಳಿಸಿದೆ.