2021ರಲ್ಲಿ ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯವರ ವಿರುದ್ಧ ನಡೆದ ಹಿಂಸಾತ್ಮಕ ಅಪರಾಧಗಳು ಶೇ.75ರಷ್ಟು ಹೆಚ್ಚಳವಾಗಿದ್ದು, ಪ್ರಸಕ್ತ ವರ್ಷ 486 ಹಿಂಸಾತ್ಮಕ ಪ್ರಕರಣಗಳು ನಡೆದಿರುವುದಾಗಿ ಕ್ರಿಶ್ಚಿಯನ್ ಹಕ್ಕುಗಳ ರಕ್ಷಣಾ ಸಂಸ್ಥೆ ವರದಿ ನೀಡಿದೆ.
ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಭಾರತದಲ್ಲಿ 2014 ರಿಂದ 2021ರವರೆಗೆ ‘ಕ್ರೈಸ್ತರಿಗೆ ಅತ್ಯಂತ ಹಿಂಸಾತ್ಮಕ ವರ್ಷ’ ಎಂದು ವರದಿಯನ್ನು ಉಲ್ಲೇಖಿಸಿ ದಿ ಪ್ರಿಂಟ್ ವರದಿ ಮಾಡಿದೆ.
ಲಾರ್ಡ್ ಜೀಸ್ ಕ್ರೈಸ್ಟ್ – ಕ್ರಿಸ್ಮಸ್ ಜನ್ಮದಿನ ಆಚರಿಸದಂತೆ ವರ್ಷದ ಕೊನೆಯ ಎರಡು ತಿಂಗಳಲ್ಲಿ ಕ್ರಿಶ್ಚಿಯನ್ನರಿಗೆ ಎಚ್ಚರಿಕೆ ನೀಡಿದ 104 ಘಟನೆಗಳು ನಡೆದಿವೆ. 77 ಘಟನೆಗಳಿಗೆ ನಡೆದ ಅಕ್ಟೋಬರ್ ಅತ್ಯಂತ ಹಿಂಸಾತ್ಮಕ ತಿಂಗಳು ಎಂದು ಅದು ಹೇಳಿದೆ.
ಶುಕ್ರವಾರ ಬಿಡುಗಡೆಯಾದ ವರದಿ ಪ್ರಕಾರ, 2014ರಲ್ಲಿ 127, 2015ರಲ್ಲಿ 142, 2016ರಲ್ಲಿ 226, 2017ರಲ್ಲಿ 248, 2018ರಲ್ಲಿ 292 ಮತ್ತು 2019ರಲ್ಲಿ 328 ಹಿಂಸಾತ್ಮಕ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಕ್ರಿಶ್ಚಿಯನ್ನರ ಮೇಲೆ ನಡೆದ ದಾಳಿಗಳ ಸಂಖ್ಯೆ 486ಕ್ಕೆ ಏರಿಕೆ ಆಗಿದೆ.
ಉತ್ತರ ಪ್ರದೇಶದಲ್ಲಿ 2021ರಲ್ಲಿ ಕ್ರಿಶ್ಚಿಯನ್ ಸಮುದಾಯದವರ ಮೇಲೆ 102 ಹಿಂಸಾತ್ಮಕ ಪ್ರಕರಣಗಳು ನಡೆದಿದ್ದು ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಇಲ್ಲಿ ವರದಿಯಾಗಿವೆ. ಧಾರ್ಮಿಕ ಉಗ್ರಗಾಮಿಗಳಿಂದ ಪ್ರಚೋದನೆಗೊಳಗಾದ ಗುಂಪುಗಳು ಪ್ರಾರ್ಥನೆ ಕೂಟಕ್ಕೆ ನುಗ್ಗುವುದು ಮತ್ತು ಮತಾಂತರ ಆರೋಪದ ಮೇಲೆ ಸಮುದಾಯದವರನ್ನು ಸುತ್ತುವರೆದಿರುವುದ ಕಂಡುಬಂದಿದೆ ಎಂದು ವರದಿ ಹೇಳಿದೆ.
ಪ್ರಚೋದನೆಗೊಂಡ ಗುಂಪುಗಳು ಪೊಲೀಸರಿಗೆ ಹಸ್ತಾಂತರಿಸುವ ಮೊದಲು ಕ್ರಿಮಿನಲ್ ಬೆದರಿಕೆ ಹಾಕಿದ್ದು, ದೈಹಿಕ ಹಲ್ಲೆ ನಡೆಸಿವೆ. ಆಗಾಗ್ಗೆ ಕೋಮು ಘೋಷಣೆಗಳು ನಡೆದಿವೆ. ಆದರೆ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಲ್ಲುತ್ತಾರೆ ಎಂದು ವರದಿಯಲ್ಲಿ ಹೇಳಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಫೋರಂ ಮುಖ್ಯಸ್ಥ, ದೆಹಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯ ಎ.ಸಿ ಮೈಕೆಲ್, ಸುಳ್ಳು ಆರೋಪಗಳು ದ್ವೇಷವನ್ನು ಸೃಷ್ಟಿಸುವ ಜೊತೆಗೆ ಧಾರ್ಮಿಕ ಸಾಮರಸ್ಯ ಹಾಳುಮಾಡುತ್ತದೆ ಎಂದು ಹೇಳಿದರು. ಕ್ರೈಸ್ತರು ಮೋಸದಿಂದ ಮತಾಂತರ ಮಾಡುವರೆಂದು ಆರೋಪಿಸಿ ಮಾಡುತ್ತಿರುವ ಭಾಷಣಗಳಿಂದ ಇಂತಹ ಅಪರಾಧ ಘಟನೆಗಳ ಹೆಚ್ಚಳಕ್ಕೆ ಕಾರಣವಾಗಿದೆ.


