Friday, September 20, 2024
Google search engine
Homeಮುಖಪುಟಸಮಾನ ವೇತನಕ್ಕೆ ಆಗ್ರಹಿಸಿ ಬೂಟ್ ಪಾಲೀಶ್ ಮಾಡಿ, ಟೀ ಮಾರಿದ ಅತಿಥಿ ಉಪನ್ಯಾಸಕರು!!!

ಸಮಾನ ವೇತನಕ್ಕೆ ಆಗ್ರಹಿಸಿ ಬೂಟ್ ಪಾಲೀಶ್ ಮಾಡಿ, ಟೀ ಮಾರಿದ ಅತಿಥಿ ಉಪನ್ಯಾಸಕರು!!!

ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಂಕಷ್ಟಗಳ ಸರಮಾಲೆ ಸರ್ಕಾರ ಮುನ್ನಡೆಸುವವರಿಗೆ ಕಾಣುತ್ತಿಲ್ಲ. ನಮ್ಮನ್ನು ಜೀತದ ಆಳುಗಳಂತೆ ನಡೆಸಿಕೊಂಡು ಅವಮಾನ ಮಾಡುತ್ತಾ ಬರಲಾಗುತ್ತಿದೆ. ಈ ಅವಮಾನ ಸಹಿಸಲಾರದೆ ನೋವು ತಡೆಯಲಾರದೆ ಪ್ರಾಣ ಬಿಟ್ಟವರೂ ಉಂಟು ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಂಡರು.

ಅತಿಥಿ ಉಪನ್ಯಾಸಕರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಮೂರು-ನಾಲ್ಕು ತಿಂಗಳಿಗೊಮ್ಮೆ ಸಿಗುವ ಗೌರವಧನ ಸಾಲ ತೀರಿಸಲು ಸಾಲುತ್ತಿಲ್ಲ. ಇದರಿಂದ ಮತ್ತೆ ಸಾಲ ಮಾಡಬೇಕಾದಂತಹ ಪರಿಸ್ಥಿತಿ ಅತಿಥಿ ಉಪನ್ಯಾಸಕರದ್ದು. ಮನೆ ಬಾಡಿಗೆ, ಮಕ್ಕಳ ಶಾಲಾ-ಕಾಲೇಜು ಶುಲ್ಕ, ತುತ್ತಿನ ಚೀಲ ತುಂಬಿಸಿಕೊಳ್ಳಲು, ಬಸ್ ಚಾರ್ಜ್ – ಹೀಗೆ ಎಲ್ಲದಕ್ಕೂ ಹಣ ಬೇಕು. ಹಣವಿಲ್ಲದೆಯೂ ಈ ಅತಿಥಿಗೆ ಹೆಚ್ಚುವರಿ ತರಗತಿಗಳು ಮೇಲೇರಿ ಕೂರುತ್ತವೆ. ಇಂತಹ ಭಾರದಿಂದ ಅತಿಥಿಗಳ ಬೆನ್ನು ಬಾಗಿಹೋಗಿದೆ. ನಮ್ಮ ಬೇಡಿಕೆ ಈಡೇರಿಸಿ ಅಂತಾ ದಶಕಗಳಿಂದ ಪ್ರತಿಭಟನೆ ಮಾಡಿ ಕೂಗಿ ಹೇಳುತ್ತಿದ್ದರೂ ಸರ್ಕಾರಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅತಿಥಿ-ಗುರು ದೇವೋಭವ ಎನ್ನುವ ಮಾತುಗಳೆಲ್ಲ ಬರೀ ಬೂಟಾಟಿಕೆಯಾಗಿ ಕಾಣುತ್ತಿವೆ.

ಡಿಸೆಂಬರ್ 28ರಿಂದ ತುಮಕೂರಿನ ಅಮಾನಿಕೆರೆಯ ಗಾಜಿನ ಮನೆ ಹಿಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿಯಲ್ಲಿ ಎರಡನೇ ದಿನ ಪೂರೈಸಿರುವ ಅತಿಥಿ ಉಪನ್ಯಾಸಕರು ಇಂದು ವಿಭಿನ್ನ ಪ್ರತಿಭಟನೆ ನಡೆಸಿದರು. ಶೂ ಪಾಲಿಷ್ ಮಾಡಿ, ಟೀ ತಾವೇ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ ಜನರಿಗೂ ತಮಗಾಗುತ್ತಿರುವ ಅನ್ಯಾಯವನ್ನು ತಿಳಿಸುವ ಪ್ರಯತ್ನ ಮಾಡಿದರು. ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಂಕಷ್ಟಗಳ ಸರಮಾಲೆ ಸರ್ಕಾರ ಮುನ್ನಡೆಸುವವರಿಗೆ ಕಾಣುತ್ತಿಲ್ಲ. ನಮ್ಮನ್ನು ಜೀತದ ಆಳುಗಳಂತೆ ನಡೆಸಿಕೊಂಡು ಅವಮಾನ ಮಾಡುತ್ತಾ ಬರಲಾಗುತ್ತಿದೆ. ಈ ಅವಮಾನ ಸಹಿಸಲಾರದೆ ನೋವು ತಡೆಯಲಾರದೆ ಪ್ರಾಣ ಬಿಟ್ಟವರೂ ಉಂಟು ಎಂದು ಅತಿಥಿ ಉಪನ್ಯಾಸಕರು ದಿ ನ್ಯೂಸ್ ಕಿಟ್.ಕಾಂ ಜೊತೆ ತೋಡಿಕೊಂಡರು.

ಅತಿಥಿ ಉಪನ್ಯಾಸಕರು ತಾವು ಪಡೆದ ಪದವಿ ನಾಮಫಲಕಗಳನ್ನು ಕೊರಳಿಗೆ ಹಾಕಿಕೊಂಡು ಗಮನ ಸೆಳೆದರು. ಎಂ.ಎ., ಪಿಎಚ್.ಡಿ., ಎಂ.ಎಸ್.ಸಿ., ಪಿಎಚ್.ಡಿ., ಎಂ.ಕಾಂ. ಪಿಎಚ್.ಡಿ. ಎಂಫಿಲ್ ಪದವಿಯ ಪ್ರಮಾಣ ಪತ್ರಗಳನ್ನು ಕೊರಳಿಗೆ ಹಾಕಿಕೊಂಡು ಶೈಕ್ಷಣಿಕ ವ್ಯವಸ್ಥೆಯ ಕಠೋರ ಪರಿಸ್ಥಿತಿ ಏನೆಂಬುದನ್ನು ತಿಳಿಸಿದರು. ಉಪನ್ಯಾಸಕಿಯರು ಜ್ಯೂಸ್, ಮಜ್ಜಿಗೆ, ಟೀ ಮಾರಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪಿಯುಸಿಎಲ್ ಜಿಲ್ಲಾಧ್ಯಕ್ಷ ಹಾಗೂ ಜನಪರ ಚಿಂತಕ ಕೆ.ದೊರೈರಾಜು ಅವರು ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕೆಂಬುದು ಸಂವಿಧಾನಬದ್ದ ಹಕ್ಕು. ಆದರೆ ಯಾವುದೇ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಇಡೀ ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆ ಹದಗೆಡುತ್ತಿದೆ. ಶೇ.70ರಷ್ಟು ಅತಿಥಿ ಉಪನ್ಯಾಸಕರು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದರ ನಡುವೆಯೇ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಹೇಳುತ್ತಿದೆ. ಶೇ.30ರಷ್ಟು ಉಪನ್ಯಾಸಕರನ್ನು ಇಟ್ಟುಕೊಂಡು ಹೊಸ ಶಿಕ್ಷಣ ನೀತಿ ಯಶಸ್ವಿಗೊಳಿಸುವುದಾದರೂ ಹೇಗೆ ಸಾಧ್ಯ. ಸರ್ಕಾರಕ್ಕೆ ಇಂಥವರಿಗೆ ಸಹಾಯ ಮಾಡುವ ಮನಸ್ಥಿತಿ ಇಲ್ಲ. ಶೈಕ್ಷಣಿಕ ವ್ಯವಸ್ಥೆ ಅಪಾಯದಲ್ಲಿದೆ. ಆದರೆ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಕಣ್ಣೊರೆಸಲು ಸಮಿತಿ ರಚನೆ ಮಾಡುವುದಾಗಿ ಹೇಳುತ್ತಿದೆ. ಈಗಿನ ಶಿಕ್ಷಣ ಸಚಿವರ ಇರುವ ವ್ಯವಸ್ಥೆಯನ್ನು ಕಿತ್ತುಕೊಂಡಿದ್ದಾರೆ. ಹಾಗಾಗಿ ಸರ್ಕಾರ ಅತಿಥಿ ಉಪನ್ಯಾಸಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಹಲವು ಮಂದಿ ಹೋರಾಟಗಾರರು, ಸಾರ್ವಜನಿಕರು ಮತ್ತು ನಿವೃತ್ತ ನೌಕರರು ಅತಿಥಿ ಉಪನ್ಯಾಸಕರ ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular