ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಜನವರಿ 9 ರಿಂದ 19ರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಮೇಕೆದಾಟು ಇಂದ ಪಾದಯಾತ್ರೆ ಆರಂಭವಾಗಲಿದ್ದು ಅಲ್ಲಿಂದ 75 ಕಿ.ಮೀ ದೂರದ ಕೆಂಗೇರಿ ನಗರ ಪ್ರದೇಶಕ್ಕೆ ಬರಲು ಐದು ದಿನ ಕಾಲಾವಕಾಶ ಬೇಕು. ಐದು ದಿನ ಗ್ರಾಮೀಣ ಪ್ರದೇಶ ಮತ್ತು ಐದು ದಿನ ನಗರ ಪ್ರದೇಶದಲ್ಲಿ ಪಾದಯಾತ್ರೆ ನಡೆಯಲಿದೆ ಎಂದರು.
ಬಹಳ ವರ್ಷಗಳಿಂದ ಮೇಕೆದಾಟು ಯೋಜನೆ ಪ್ರಾರಂಭಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದರು. ನಾನು ನೀರಾವರಿ ಸಚಿವನಾಗಿದ್ದಾಗ ಅದಕ್ಕೆ ಅನುಮತಿ ನೀಡಿದ್ದೆ ಎಂದು ಹೇಳಿದರು.

ಇದು ಸಮತೋಲಿತ ನೀರಾವರಿ ಯೋಜನೆ. ಇದರಿಂದ ರೈತರು ಹಾಗೂ ಬೆಂಗಳೂರು ಜನರ ಕುಡಿಯುವ ನೀರಿಗೆ ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆಗೂ ನೆರವಾಗುತ್ತದೆ. ನಮ್ಮ ನೀರು, ನಮ್ಮ ಭೂಮಿ, ನಮ್ಮ ಹಣದಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಇದು ನಮ್ಮ ಯೋಜನೆಯಾದರೂ ಲಾಭ ಮಾತ್ರ ಉಭಯ ರಾಜ್ಯಗಳಿಗೂ ಆಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಂದಾಳತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಎಲ್ಲ ವರ್ಗ, ಸಮುದಾಯಕ್ಕೆ ಸಂಬಂಧಿಸಿದ ಹೋರಾಟ ಇದಾಗಿದೆ. ಕೈಗಾರಿಕೆ, ರೈತರು, ಕಾರ್ಮಿಕರು, ಕಲಾವಿದರು ಸೇರಿ ಹೋರಾಟದಲ್ಲಿ ಭಾಗವಹಿಸಬಹುದು ಎಂದರು.
ಒಂದು ಕಾಲದಲ್ಲಿ ಈ ಯೋಜನೆಗೆ ನಾವು ಕೂಡ ಹಣ ನೀಡುತ್ತೇವೆ ಎಂದು ತಮಿಳುನಾಡು ಹೇಳಿತ್ತು. ಆದರೆ ಅವರ ಹಣ ಬೇಡ. ನಮ್ಮ ಹಣದಲ್ಲೇ ನಾವು ಯೋಜನೆ ಮಾಡುತ್ತೇವೆ. ಈ ಯೋಜನೆಗೆ ಹಾಕುವ ಬಂಡವಾಳ ಅಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಿಂದಲೇ ವಾಪಸ್ ಬರುತ್ತದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ವಿವರಿಸಿದರು.


