ಮುಖ್ಯಮಂತ್ರಿ ಬದಲಾವಣೆ ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದೆ. ಈ ಸರ್ಕಾರ ಆಪರೇಷನ್ ಕಮಲದ ಮೂಲಕ ಬಂದ ಸರ್ಕಾರ. ಈ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹ್ಮದ್, ನಮ್ಮ ಶಾಸಕರನ್ನು ಖರೀದಿ ಮಾಡಿ ಅಧಿಕಾರ ಹಿಡಿದ ಸರ್ಕಾರ. ಇದರಿಂದ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ. ರಾಜ್ಯದ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಬೇಕು ಎಂದು ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಇದೊಂದು 40% ಕಮಿಷನ್ ಸರ್ಕಾರ ಎಂಬುದು ಗುತ್ತಿಗೆದಾರರು ಪ್ರಧಾನಿಗೆ ಬರೆದ ಪತ್ರವೇ ಸಾಕ್ಷಿಯಾಗಿದೆ. ಕ್ರಮ ಕೈಗೊಳ್ಳಬೇಕಿದ್ ಪ್ರಧಾನಿ ಮೌನ ವಹಿಸಿರುವುದು ನೋಡಿದರೆ ಏನು ಆಗುವುದಿಲ್ಲ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.
ಸಚಿವ ಭೈರತಿ ಬಸವರಾಜ್ ಭೂಹಗರಣದಲ್ಲಿ ಸಿಲುಕಿದ್ದು ಅವರು ರಾಜೀನಾಮೆ ನೀಡಬೇಕು. ಇಲ್ಲವೇ ಮುಖ್ಯಮಂತ್ರಿಗಳೇ ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರ ವಿಶ್ವಾಸ ಕಳೆದುಕೊಳ್ಳಲಿದೆ. ಇದು ಭಾರತೀಯ ಜನತಾ ಪಕ್ಷ ಅಲ್ಲ, ಭ್ರಷ್ಟ ಜನತಾ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯ ಗದ್ದಲದ ಬಗ್ಗೆ ನಮ್ಮ ನಿಲುವು ತಿಳಿಸಿದ್ದೇವೆ. ಕೃತ್ಯ ಎಸಗಿರುವ ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಧಿವೇಶನ ನಡೆಯುವ ಸಮಯದಲ್ಲಿ ಇಂತಹ ಘಟನೆ ಆಗಬಾರದಿತ್ತು ಎಂದರು.
ಬೆಳಗಾವಿಯಲ್ಲಿ ದಾಳಿ ಹಿಂದೆ ಮಹಾರಾಷ್ಟ್ರ ಕಾಂಗ್ರೆಸ್ ಮರಾಠಿಗರಿಂದ ಈ ಕೃತ್ಯ ನಡೆಸಲಾಗಿದೆ ಎಂಬ ಶ್ರೀರಾಮಲು ಹೇಳಿಕೆಗೆ ಕಿಡಿಕಾರಿದರು. ಶ್ರೀರಾಮುಲು ಮುಖ್ಯಮಂತ್ರಿಗಳೂ ಅಲ್ಲ, ಗೃಹಸಚಿವರೂ ಅಲ್ಲ. ಅವರು ತಮ್ಮ ಖಾತೆ ನಿರ್ವಹಣೆ ಮಾಡಿದರೆ ಸಾಕು. ಈ ಬಗ್ಗೆ ಮುಖ್ಯಮಂತ್ರಿ ಅಥವಾ ಗೃಹ ಸಚಿವರು ಮಾತನಾಡಿದರೆ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದ ತಿಳಿಸಿದರು.


