ದತ್ತ ಜಯಂತಿಗೆ ತುಮಕೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮುನ್ನ ಮೆರವಣಿಗೆ ನಡೆಸುವುದು ಬೇಡ ಎಂದು ಹೇಳಿದ ವಿಶ್ವ ಹಿಂದೂ ಪರಿಷತ್ ಮುಖಂಡ ಜಿ.ಕೆ.ಶ್ರೀನಿವಾಸ್ ಅವರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆಗೆ ಮುಂದಾಗಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಟೌನ್ ಹಾಲ್ ನಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಡಿಸೆಂಬರ್ 19ರಂದು ಬೆಳಗ್ಗೆ ತುಮಕೂರಿನಿಂದ 14 ಬಸ್ ಗಳ ಮೂಲಕ ಚಿಕ್ಕಮಗಳೂರಿಗೆ ತೆರಳಿದರು. ಇದಕ್ಕೂ ಮೊದಲು ವಿಶ್ವ ಹಿಂದೂ ಪರಿಷತ್ ಮುಖಂಡ ಜಿ.ಕೆ.ಶ್ರೀನಿವಾಸ್ ಪೊಲೀಸರಿಂದ ಅನುಮತಿ ಪಡೆದಿಲ್ಲ. ಹಾಗಾಗಿ ಮೆರವಣಿಗೆ ನಡೆಸುವುದು ಬೇಡ ಎಂದು ಹೇಳಿದ್ದಾರೆ.
ಇದರಿಂದ ನೂರಾರು ಕಾರ್ಯಕರ್ತರು ಕೂಡ ಮೌನವಾಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಾಜಿ ಸಚಿವ ಸೊಗಡು ಶಿವಣ್ಣ ಏರಿದ ದನಿಯಲ್ಲಿ ಕೂಗುತ್ತಾ ಹಲ್ಲೆಗೆ ಮುಂದಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
‘ಪ್ರಾಣ ಹೋದರೂ ಇಲ್ಲಿಯೆ ಕುಳಿತುಕೊಳ್ಳಬೇಕು ಎಂದು ಸೊಗಡು ಶಿವಣ್ಣ ಹೇಳುತ್ತಾರೆ. ಅದಕ್ಕೆ ಜಿ.ಕೆ.ಶ್ರೀನಿವಾಸ್ ನಾನು ಕುಳಿತುಕೊಳ್ಳುವುದಿಲ್ಲ ಎನ್ನುತ್ತಾರೆ. ಆಗ ಸೊಗಡು ಶಿವಣ್ಣ ಆಗದಿದ್ದರೆ ಹೋಗು, ಇಲ್ಲಿರಬೇಡ’ ಎನ್ನುವ ಮಾತುಗಳು ವಿಡಿಯೋದಲ್ಲಿ ಕೇಳಿ ಬಂದಿವೆ.
ಜಿ.ಕೆ.ಶ್ರೀನಿವಾಸ್ ಅವರು ಬೇರೊಬ್ಬ ರಾಜಕಾರಣಿಯ ಜೊತೆ ಗುರುತಿಸಿಕೊಳ್ಳುವುದು ಸೊಗಡು ಶಿವಣ್ಣ ಅವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಶ್ರೀನಿವಾಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸೊಗಡು ಶಿವಣ್ಣ ಹಲ್ಲೆಗೆ ಮುಂದಾಗುತ್ತಿದ್ದಂತೆಯೇ ಕೆಲವರು ಅವರನ್ನು ಸುಮ್ಮನಿರುವಂತೆ ಮನವಿ ಮಾಡಿದರು ಎಂದು ತಿಳಿದುಬಂದಿದೆ.