ದನ ಕಳ್ಳಸಾಗಣೆದಾರರಿಂದ ಲಂಚ ಪಡೆಯುವ ಪೊಲೀಸರು ನಾಯಿಗಳಂತೆ ಮಲಗಿ ನಿರ್ಭಯವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಾರೆ ಎಂದು ಕರ್ನಾಟಕ ಗೃಹಸಚಿವ ಅರಗ ಜ್ಞಾನೇಂದ್ರ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್ ನಲ್ಲಿ ಜಾನುವಾರು ವಿಶೇಷವಾಗಿ ಹಸುಗಳ ಕಳ್ಳತನ ಮತ್ತು ಕಳ್ಳಸಾಗಣೆಯನ್ನು ಪರಿಶೀಲಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಜ್ಞಾನೇಂದ್ರ ಪೊಲೀಸ್ ಅಧಿಕಾರಿಯ ಮೇಲೆ ಫೋನ್ ನಲ್ಲಿ ಕಿರುಚಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
“ದನಗಳನ್ನು ಸಾಗಿಸುವವರು ನಿತ್ಯ ಅಪರಾಧಿಗಳು. ನಿಮ್ಮ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದ್ದರೂ ಲಂಚ ಪಡೆದು ನಾಯಿಗಳಂತೆ ಮಲಗುತ್ತಾರೆ. ನಿಮ್ಮ ಪೊಲೀಸರಿಗೆ ಸ್ವಾಭಿಮಾನ ಬೇಕು” ಎಂದು ಜ್ಞಾನೇಂದ್ರ ವಿಡಿಯೋದಲ್ಲಿ ಹೇಳಿರುವುದು ಕೇಳುತ್ತದೆ.
“ನಾನು ಇಲ್ಲಿಯವರೆಗೆ ಏನನ್ನೂ ಹೇಳಿಲ್ಲ. ಆದರೆ ನಾನು ಗೃಹ ಸಚಿವನಾಗಿ ಮುಂದುವರೆಯಬೇಕೇ ಅಥವಾ ಬೇಡವೇ”ಎಂದು ಜ್ಞಾನೇಂದ್ರ ಹೇಳಿದ್ದಾರೆ.
“ಇಡೀ ಪೊಲೀಸ್ ಪಡೆ ಇಂದು ಕೊಳೆತು ಹೋಗಿದೆ. ನಾವು ಸಂಬಳ ನೀಡುತ್ತೇವೆ. ಆದರೆ ಯಾರೂ ಸಂಬಳದಲ್ಲಿ ಬದುಕಲು ಬಯಸುವುದಿಲ್ಲ. ಅವರು ಲಂಚದ ಮೇಲೆ ಬದುಕಲು ಬಯಸುತ್ತಾರೆ” ಎಂದು ಜ್ಞಾನೇಂದ್ರ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಂತರ ಸ್ಪಷ್ಟನೆ ನೀಡಿರುವ ಸಚಿವರು ತಾವು ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಹೋಲಿಕೆ ಮಾಡಿಲ್ಲ. ಅವರಲ್ಲೊಂದು ವಿಭಾಗವನ್ನು ಹೋಲಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಹೊಸ ಕಾನೂನು ಜಾರಿಯಾಗಿದ್ದರೂ ಕೆಲವು ಪೊಲೀಸರು ಗೋವು ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೆಲವು ಪೊಲೀಸರು ದನಗಳ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿರುವ ಹಿನ್ನೆಲೆಯಲ್ಲಿ ನಾನು ಕೋಪದಿಂದ ಮಾತನಾಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.


