ಪದೇ ಪದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಾವೇಕೆ ಭೇಟಿ ಮಾಡಬೇಕು. ಇದು ಸಾಂವಿಧಾನಿಕವಾಗಿ ಕಡ್ಡಾಯ ಏನಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೆಹಲಿಯಲ್ಲಿ ನವೆಂಬರ್ 24ರಂದು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವುದಾಗಿ ಸಿಎಂ ಮಮತಾ ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮುಂದಿನ ವರ್ಷ ಏಪ್ರಿಲ್ ನಲ್ಲಿ ನಡೆಯಲಿರುವ ಬಂಗಾಳ ವಿಶ್ವ ಸಮ್ಮೇಳನದ ಕುರಿತು ಚರ್ಚೆ ನಡೆಸಿ ಯಾವುದೇ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡದೇ ತೆರಳಿದ್ದಾರೆ.
ಪ್ರತಿಪಕ್ಷಗಳ ನಾಯಕರು ಪಂಜಾಬ್ ಚುನಾವಣೆ ಸಂಬಂಧ ಕಾರ್ಯನಿರತರಾಗಿದ್ದಾರೆ ಎಂದು ಮಮತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೇಘಾಲಯ:12 ಕಾಂಗ್ರೆಸ್ ಶಾಸಕರು ಟಿಎಂಸಿ ಸೇರ್ಪಡೆ?
ಮೇಘಾಲಯದಲ್ಲಿ 12 ಮಂದಿ ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮ ಕೂಡ ಟಿಎಂಸಿ ಸೇರ್ಪಡೆಗೊಂಡಿದ್ದಾರೆಂದು ಹೇಳಲಾಗುತ್ತಿದ್ದು ಯಾವುದೇ ಅಧಿಕೃತ ಪ್ರಕಟಣೆ ಖಚಿತಪಡಿಸಿಲ್ಲ.
ರಾಜ್ಯದ ಕಾಂಗ್ರೆಸ್ ನ 17 ಮಂದಿ ಶಾಸಕರಲ್ಲಿ ಆಂತರಿಕ ಕಚ್ಚಾಟ ಇದ್ದು ಬಹುತೇಕ ಶಾಸಕರು ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.


