ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಡಿಸೆಂಬರ 20 ಮತ್ತು 21ರಂದು ವಿಚಾರಣೆ ನಡೆಸಲಿದೆ.
ಜೈಲಿನಲ್ಲಿದ್ದ ಆರೋಪಿಗಳನ್ನು ಧಾರವಾಡ ನ್ಯಾಯಾಲಯಕ್ಕೆ ಕರೆತಂದಾಗ ಆರೋಪಿಗಳು ಕುಟುಂಬದವರು ಮತ್ತು ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ನ್ಯಾಯಾಲಯ ಅವಕಾಶ ನೀಡಿತು. ಹಾಗಾಗಿ ಕುಟುಂಬ ಸದಸ್ಯರು ಆರೋಪಿಗಳನ್ನ ಭೇಟಿಯಾಗಿ ಮಾತುಕತೆ ನಡೆಸಿದರು.
ವಿಚಾರಣೆಯನ್ನು ಧಾರವಾಡದಲ್ಲಿ ನಡೆಸುವಂತೆ ಆರೋಪಿಗಳು ಮಾಡಿದ ಮನವಿಗೆ ನ್ಯಾಯಾಲಯ ಮಾನ್ಯ ಮಾಡಿತು. ನ್ಯಾಯಾಧೀಶೆ ಪಂಚಾಕ್ಷರಿ ಆರೋಪಿಗಳು ಹಿಂದಿ ಮತ್ತು ಮರಾಠಿಯಲ್ಲಿ ಮಾತನಾಡುತ್ತಿದ್ದಾಗ ನಿಮಗೆ ಕನ್ನಡ ಬರುವುದಿಲ್ಲವೇ? ಕನ್ನಡದಲ್ಲಿ ಮಾತನಾಡಿ ಎಂದು ತಿಳಿಸಿದರು. ನಂತರ ಆರೋಪಿಗಳು ಕನ್ನಡದಲ್ಲೇ ಉತ್ತರಿಸಿದರು ಎಂದು ಪ್ರಜಾವಾಣಿ ವರದಿ ಮಾಡಿದೆ.
ಆರೋಪಿಗಳಾದ ಪ್ರವೀಣ ಚತುರ, ಅಮಿತ್ ಬುದ್ದಿ, ಗಣೇಶ್ ಮಿಸ್ಕಿನ್ ಮತ್ತು ವಾಸುದೇವ ಸೂರ್ಯವಂಶಿ ಅವರನ್ನು ವಿವಿಧ ಕಾರಾಗೃಹಗಳಿಂದ ನ್ಯಾಯಾಲಯಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆತರಲಾಯಿತು.


