ರೈತರ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆಬಾಗಿದ್ದು ಹಿಟ್ಲರ್ ಆಡಳಿತ ಕೊನೆಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲೂ ಹಿಂಪಡೆಯಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಂದ್ರ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದಲ್ಲಿ 700 ರೈತರು ಪ್ರಾಣ ಕಳೆದುಕೊಂಡರು. ಆದರೂ ಕೃಷಿ ಕಾಯ್ದೆ ರದ್ದುಪಡಿಸದ ಕೇಂದ್ರ ಸರ್ಕಾರ ಮುಂದಿನ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಈಗ ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದು ಬಿಜೆಪಿಗೆ ಜ್ಞಾನೋದಯವಾಗಿದೆ ಎಂದು ಟೀಕಿಸಿದರು.
ಎಪಿಎಂಸಿ ಕಾಯ್ದೆ ಜಾರಿಯಿಂದ ಎಪಿಎಂಸಿಗಳು ಮುಚ್ಚುತ್ತಿವೆ. ರಾಜ್ಯದಲ್ಲಿ ನಮ್ಮ ಸರ್ಕಾರ ಮೂಲಸೌಲಭ್ಯ ಒದಗಿಸಿದ್ದರೆ, ಅದನ್ನು ಇವರು ನಿಲ್ಲಿಸಿದರು ಎಂದು ದೂರಿದರು.
ಮಳೆಯಿಂದ ರಾಜ್ಯದ ಜನ ತತ್ತರಿಸಿಹೋಗಿದ್ದು ಕೋಟ್ಯಂತರ ರೂಪಾಯಿ ಬೆಳೆಗೆ ಹಾನಿಯಾಗಿದೆ. ರಸ್ತೆಗಳು ಗುಂಬಿ ಬಿದ್ದಿವೆ. ಈ ಬಗ್ಗೆ ಡಿಸಿಗಳ ಜೊತೆ ಸಭೆ ನಡೆಸಿದ್ದು ಬಿಟ್ಟರೆ ಜನರ ಸಮಸ್ಯೆಗಳ ಬಗ್ಗೆ ಸಿಎಂ ಸಾಹೇಬರಿಗೆ ಕಾಳಜಿ ಇಲ್ಲ. ಸಿನಿಮಾ ನೋಡುವುದರಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.
ಕಂಟ್ರಾಕ್ಟರ್ ಗಳು ಪತ್ರ ಬರೆದಿದ್ದು ಮೋದಿಯವರ ಮುಖವಾಡ ಕಳಚುತ್ತಿದೆ. ಇಂತಹ ಪ್ರಸಂಗ ನಾವು ನೋಡಿಲ್ಲ. ಕಂಟ್ರಾಕ್ಟರ್ಸ್ ಈ ಹಿಂದೆ ದೂರು ನೀಡಿದ ಉದಾಹರಣೆಯಿಲ್ಲ. ಇದೇ ಮೊದಲು ಪ್ರಧಾನಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಐಎಎಸ್ ಅಧಿಕಾರಿಗಳು ವರ್ಗಾವಣೆಗೆ ಕೈಕಟ್ಟಿ ನಿಲ್ತಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನ ಲೀಗಲೈಸ್ ಮಾಡಿದೆ. ಇದರ ಬಗ್ಗೆ ನಾವು ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.
ನಮ್ಮಲ್ಲಿ ಮೂರು ನೀರಾವರಿ ನಿಗಮಗಳಿವೆ. ಒಂದೊಂದು ನಿಗಮದಲ್ಲಿ ಗುತ್ತಿಗೆದಾರರಿಗೆ ಕೊಡಬೇಕಾದ ನಾಲ್ಕೈದು ಸಾವಿರ ಕೋಟಿ ಬಾಕಿಯಿದೆ. ಹೀಗಾಗಿ ಗುತ್ತಿಗೆದಾರರು ಊರು ಬಿಟ್ಟುಹೋಗ್ತಿದ್ದಾರೆ. ಜನ ಇವತ್ತು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರು ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ತರಲಾಗಿದ್ದ ರೈತ ವಿರೋಧಿ ಕಾನೂನಿನ ವಿರುದ್ಧ ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ. ರೈತ ವಿರೋಧಿ ಕಾಯ್ದೆ ಹಿಂಪಡೆದ ವಿಚಾರವಾಗಿ ಪಕ್ಷವು ಕಿಸಾನ್ ವಿಜಯ ದಿವಸ್ ಅನ್ನು ರಾಜ್ಯದಾದ್ಯಂತ ಆಚರಣೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದರು.