ದೆಹಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಕೆಲ ನಿರ್ದೇಶನ ನೀಡಿದ ಕೆಲ ಗಂಟೆಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರದಿಂದ ಶಾಲೆಗಳು ಮತ್ತು ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಬಂದ್ ಮಾಡಿ ಸರ್ಕಾರಿ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಏಳು ದಿನಗಳವರೆಗ ಮನೆಯಿಂದಲೇ ಕೆಲಸ ಮಾಡಬೇಕಾಗಿದೆ.
ನಿರ್ಮಾಣ ಕಾರ್ಯಗಳು, ಧೂಳು ಮತ್ತು ವಾಹನಗಳಿಂದ ಹೊರಬರುವ ಹೊಗೆ ಸೂಕ್ಷ್ಮ ಮಾಲಿನ್ಯಕಾರಕಗಳಿಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಆದ್ದರಿಂದ ನವೆಂಬರ್ 14 ರಿಂದ 17ರವರೆಗೆ ಈ ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ ಎಂದರು.

ನಾಲ್ಕು ಹಂತದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಲಾಕ್ ಡೌನ್ ಮಾಡುವ ಯೋಜನೆಯೂ ಒಳಗೊಂಡಿದೆ. ಮಾಲಿನ್ಯ ನಿಯಂತ್ರಿಸಲು ತುರ್ತು ಪ್ರತಿಕ್ರಿಯೆಗೆ ಆದ್ಯತೆ ನೀಡಿದೆ. ಸೋಮವಾರದಿಂದ ಒಂದು ವಾರದವರೆಗೆ ಶಾಲೆಗಳನ್ನು ಭೌತಿಕವಾಗಿ ಮುಚ್ಚಲಾಗುವುದು. ಆನ್ ಲೈನ್ ತರಗತಿ ನಡೆಸುತ್ತೇವೆ. ಇದರಿಂದ ಮಕ್ಕಳ ಕಲುಷಿತ ಗಾಳಿ ಉಸಿರಾಡುವುದನ್ನು ತಡೆಯಬಹುದಾಗಿದೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.
ಸರ್ಕಾರಿ ಕಚೇರಿಗಳು ಮನೆಯಿಂದಲೇ ಒಂದು ವಾರದವರೆಗೆ ನೂರರಷ್ಟು ಕೆಲಸ ನಿರ್ವಹಿಸುತ್ತವೆ. ಖಾಸಗಿ ಕಚೇರಿಗಳು ಸಾಧ್ಯವಾದಷ್ಟು ವರ್ಕ್ ಫ್ರಂ ಹೋಂ ಆಯ್ಕೆ ಮಾಡುವಂತೆ ಸಲಹೆ ನೀಡಲಾಗುವುದು ಎಂದು ಹೇಳಿದರು.
ದೀಪಾವಳಿ ಹಬ್ಬದ ನಂತರ ಗುರ್ ಗಾಂವ್, ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಿದ್ದು ಕಲುಷಿತ ಗಾಳಿಯನ್ನು ಜನರು ಉಸಿರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹರಿಯಾಣ, ದೆಹಲಿ, ಮತ್ತು ಉತ್ತರ ಪ್ರದೇಶದಲ್ಲಿ ದೀಪಾವಳಿ ಮೊದಲು ಮತ್ತು ನಂತರ ಲಕ್ಷಾಂತರ ಪಟಾಕಿಗಳನ್ನು ಸಿಡಿಸಿದರು. ಇದು ಗಾಳಿಯ ಗುಣಮಟ್ಟ ಕ್ಷೀಣಿಸಲು ಮಹತ್ವದ ಕೊಡುಗೆ ನೀಡಿದೆ.


