ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಅಯೋಧ್ಯ ಕುರಿತ ಹೊಸ ಪುಸ್ತಕ ವಿವಾದದ ಕಿಡಿಯನ್ನು ಹೊತ್ತಿಸಿದೆ. ಹೊಸ ಪುಸ್ತಕದಲ್ಲಿ ಹಿಂದುತ್ವವನ್ನು ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳೊಂದಿಗೆ ಹೋಲಿಕೆ ಮಾಡಿರುವುದು ಬಿಜೆಪಿ ನಾಯಕರನ್ನು ಕೆರಳುವಂತೆ ಮಾಡಿದೆ.
ಹಿಂದುತ್ವವನ್ನು ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಜೊತೆ ಹೋಲಿಕೆ ಮಾಡಿರುವುದನ್ನು ಪ್ರಶ್ನಿಸಿ ದೆಹಲಿ ಮೂಲದ ವಕೀಲರೊಬ್ಬರು ಸಲ್ಮಾನ್ ಖುರ್ಷಿದ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗೂ ಮೊದಲು ಮುಸ್ಲೀಂ ಮತಗಳನ್ನು ಸೆಳೆಯಲು ಕಾಂಗ್ರೆಸ್ ಕೋಮು ರಾಜಕೀಯ ನಡೆಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸಲ್ಮಾನ್ ಖುರ್ಷಿದ್ ಅವರನ್ನುಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಖುರ್ಷಿದ್ ಹೊಸ ಪುಸ್ತಕ “ಸನ್ ರೈಸ್ ಓವರ್ ಅಯೋಧ್ಯೆ: ನೇಷನ್ ಹುಡ್ ಇನ್ ಅವರ್ ಟೈಮ್ಸ್’ನ ಒಂದು ಭಾಗದಲ್ಲಿ “ಸನಾತನ ಧರ್ಮದ ಬಗ್ಗೆ ಋಷಿಗಳು ಮತ್ತು ಸಂತರಿಗೆ ತಿಳಿದಿರುವ ಹಿಂದೂ ಧರ್ಮದ ಮಾನದಂಡಗಳನ್ನು ಹಿಂದುತ್ವ ಹೊಂದಿಲ್ಲ. ಅದು ಐಸಿಸ್ ಮತ್ತು ಬೊಕೊ ಹರಾಮ್ ನಂತಹ ಗುಂಪುಗಳ ಜಿಹಾದಿಸ್ಟ್ ಇಸ್ಲಾಂ ಅನ್ನು ಹೋಲುತ್ತದೆ” ಎಂದು ಉಲ್ಲೇಖಿಸಿದೆ ಎಂದು ಎನ್.ಡಿ.ಟಿವಿ ವರದಿ ತಿಳಿಸಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ “ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ತಮ್ಮ ಹೊಸ ಪುಸ್ತಕದಲ್ಲಿ ಹಿಂದುತ್ವವು ಐಸಿಸ್ ಮತ್ತು ಬಿಕೊ ಹರಾಮ್ ನಂತಹ ಜಿಹಾದಿಸ್ಟ್ ಇಸ್ಲಾಮಿಸ್ಟ್ ಗುಂಪುಗಳನ್ನು ಹೋಲುತ್ತದೆ ಎಂದು ಬರೆದಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಬಹುದು. ಕೇಸರಿ ಭಯೋತ್ಪಾದನೆಯನ್ನು ಇಸ್ಲಾಮಿಕ್ ಜಿಹಾದ್ ಗೆ ಹೋಲಿಸಿರುವುದು ಮುಸ್ಲಿಂ ಮತಗಳನ್ನು ಪಡೆಯಲು” ಎಂದು ಟ್ವೀಟಿಸಿದ್ದಾರೆ.
“ಆರೋಪಿಯು ಹಿಂದೂ ಧರ್ಮವು ಭಯೋತ್ಪಾದಕ ಗುಂಪುಗಳಾದ ಐಸಿಸ್ ಮತ್ತು ಬೊಕೊ ಹರಾಮ್ ಗೆ ಸಮಾನವಾಗಿದೆ ಎಂದು ಹೇಳಿದ್ದು, ಈ ಹೋಲಿಕೆ ಸರಿಯಲ್ಲ. ಇದು ಹಿಂದೂಗಳನ್ನು ಅವಹೇಳನ ಮಾಡಿದೆ. ಮಾನಹಾನಿಯಾಗಿದೆ. ಸಮಾಜದ ಮೌಲ್ಯಗಳ ಮತ್ತು ಸದ್ಗುಣಗಳನ್ನು ಪ್ರಶ್ನಿಸುತ್ತದೆ. ಇದು ವಾಕ್ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ದುರುಪಯೋಗ ಎಂದು ಜಿಂದಾಲ್ ದೂರಿನಲ್ಲಿ ತಿಳಿಸಿದ್ದಾರೆ.


