ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು ಶೀಘ್ರವೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಆಯಾ ಭಾಗದ ಚುನಾಯಿತ ಪ್ರತಿನಿಧಿಗಳು ಸಭೆ ಸೇರಿ ತೀರ್ಮಾನ ಮಾಡಲಿದ್ದು ಆ ತೀರ್ಮಾನವನ್ನು ಅನುಷ್ಠಾನಕ್ಕೆ ತರುವುದು ಮಾತ್ರ ನಮ್ಮ ಕೆಲಸ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಹಾಗಾಗಿ ಈ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದರೆ ಅಭ್ಯರ್ಥಿಗಳ ಆಯ್ಕೆಯ ತೀರ್ಮಾನ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿ ಹಲವು ಕಡೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿ ಒಮ್ಮತದ ತೀರ್ಮಾನ ಮಾಡುತ್ತಾರೆ. ಆ ತೀರ್ಮಾನವನ್ನು ಪಕ್ಷ ಜಾರಿಗೆ ತರಲಿದೆ ಎಂದು ತಿಳಿಸಿದರು.
ಸತ್ಯಾಸತ್ಯತೆ ಹೊರಬರಲಿ
ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕೆಸರು ಎರೆಚಾಟದಲ್ಲಿ ತೊಡಗಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ನಡೆಯುತ್ತಿದೆ. ಆದರೆ ಸತ್ಯಾಸತ್ಯತೆ ಹೊರಬರಬೇಕು. ಯಾರು ತಪ್ಪು ಮಾಡಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಮುಖಂಡರ ಹೆಸರುಗಳು ಬಂದಿವೆ. ಅದು ಸರ್ಕಾರವೇ ನೀಡಿದ ಮಾಹಿತಿ. ಸರ್ಕಾರ ಕಾಂಗ್ರೆಸ್ ಮುಖಂಡರ ಹೆಸರನ್ನು ಮಾತ್ರ ಬಹಿರಂಗಗೊಳ್ಳುವಂತೆ ನೋಡಿಕೊಂಡಿದೆ. ಎಲ್ಲ ಸತ್ಯಾಂಶಗಳು ಹೊರಬರಬೇಕು ಎಂದು ತಿಳಿಸಿದರು.
ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಹೋರಾಟ ನಡೆಸಿಕೊಂಡು ಬಂತು. ಸಾಕ್ಷಿಗಳು ಮತ್ತು ದಾಖಲೆಸಹಿತ ಹೋರಾಟ ಮಾಡಿ ರಾಜ್ಯದ ಸಂಪತ್ತು ಲೂಟಿಯಾಗುವುದನ್ನು ನಿಲ್ಲಿಸಿದೆವು. ಆದರೆ ಇದರಿಂದ ನಮಗೆ ಯಾವ ಸ್ಥಾನಮಾನ ನೀಡಿದರು ಎಂಬುದನ್ನು ತಿಳಿದಿದ್ದೇವೆ ಸದ್ಯ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದೇವೆ. ಮುಂದಿನ ಪರಿಣಾಮಗಳ ಕುರಿತು ಎದುರುನೋಡುತ್ತಿದ್ದೇವೆ. ಆಮೇಲೆ ಮುಂದಿನ ಕ್ರಮ ಎಂದರು.


