ಪಕ್ಷ ಬಿಟ್ಟು ಹೋದವರು, ಕಾಂಗ್ರೆಸ್ ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಇರುವ ಮತ್ತು ಪಕ್ಷ ಸೇರಬಯಸುವ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಅಧಿಕಾರಕ್ಕಾಗಿ ಯಾವುದೇ ಷರತ್ತು ಹಾಕುವಂತಿಲ್ಲ. ಷರತ್ತು ಹಾಕುವವರಿಗೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿ. ದೇವೇಂದ್ರಪ್ಪ ಅವರನ್ನು ಬೇಷರತ್ ಆಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಅಲ್ಲಂ ವೀರಭದ್ರಪ್ಪ ಸಮಿತಿ ಮಾಡಿದ ಶಿಫಾರಸ್ಸಿನ ಮೇಲೆ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಜಾತ್ಯತೀತ ಜನತಾದಳ ತೊರೆದು ಕಾಂಗ್ರೆಸ್ ಸೇರುತ್ತಿರುವ ಬಿ.ದೇವೇಂದ್ರಪ್ಪ ಹಾಗೂ ಇತರೆ ಮುಖಂಡರನ್ನು ನಮ್ಮ ಪಕ್ಷದ ಪರವಾಗಿ ಸ್ವಾಗತಿಸುತ್ತೇನೆ. ಅವರು ಸ್ವಯಿಚ್ಚೆಯಿಂದ ಕಾಂಗ್ರೆಸ್ ಸೇರಿ ಸೇವೆ ಮಾಡಲು ಮುಂದಾಗಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬಿಟ್ ಕಾಯಿನ್ : ಮಾಹಿತಿ ಬಹಿರಂಗಕ್ಕೆ ಆಗ್ರಹ
ಬಿಟ್ ಕಾಯಿನ್ ಹಗರಣದಲ್ಲಿ ಕೇಳಿಬಂದಿರುವ ಹೆಸರುಗಳು, ಪ್ರಧಾನಿಗೆ ಹೋಗಿರುವ ದೂರು ಮತ್ತು ಬಂಧಿಸಿ ವಿಚಾರಣೆ ಮಾಡಿರುವವರ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.


