ಅಬುಧಾಬಿಯಲ್ಲಿ ಭಾನುವಾರ ನಡೆದ ಟಿ-20 ವಿಶ್ವಕಪ್ ಪಂದ್ಯಾವಳಿಯ ಅಂತಿಮ ಸೂಪರ್ 12 ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಎಂಟು ವಿಕೆಟ್ ಗಳ ಸುಲಭ ಗೆಲುವು ಸಾಧಿಸಿತು. ಹಾಗಾಗಿ ಸೆಮಿಫೈನಲ್ ತಲುಪುವ ಭಾರತದ ಕನಸ ಭಗ್ನವಾಗಿದ್ದು ಟಿ-20 ವಿಶ್ವಕಪ್ ನಿಂದ ಹೊರಬಿದ್ದಿದೆ.
ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ಥಾನ ಗೆಲುವು ಸಾಧಿಸಬೇಕೆಂದು ಭಾರತದಾದ್ಯಂತ ಸಹಸ್ರಾರು ಮಂದಿ ಪ್ರಾರ್ಥನೆ ಸಲ್ಲಿಸಿದ್ದರು. ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಫ್ಘಾನಿಸ್ತಾನದ ಗೆಲುವಿಗೆ ಪ್ರಾರ್ಥಿಸಿದಕ್ಕಾಗಿ ಟೀಕೆಯೂ ವ್ಯಕ್ತವಾಗಿತ್ತು.
ಆದರೆ ಆಫ್ಘಾನಿಸ್ತಾನವನ್ನು ನ್ಯೂಜಿಲೆಂಡ್ ಸುಲಭವಾಗಿ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಆಫ್ಘಾನಿಸ್ತಾನ ಉತ್ತಮ ಆಟವಾಡುವುದರಿಂದ ಭಾರತಕ್ಕೆ ವರವಾಗಲಿದೆ. ಭಾರತ ಸೆಮಿಫೈನಲ್ ತಲುಪಲು ಅವಕಾಶವಾಗುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ.
ಗೆಲುವಿಗಾಗಿ 125 ರನ್ ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಯಾವುದೇ ಒತ್ತಡಕ್ಕೆ ಸಿಲುಕದೆ ಸುಲಭವಾಗಿ ರನ್ ಕಲೆ ಹಾಕಿತು. ಆಫ್ಘಾನಿಸ್ತಾನದ ಬ್ಯಾಟ್ಸ್ ಮನ್ ಗಳು ಟ್ರೆಂಟ್ ಬೌಲ್ಟ್ ಅವರ ವೇಗ ಮತ್ತು ಸ್ವಿಂಗ್ ವಿರುದ್ಧ ಆಟವಾಡಲು ತಿಣುಕಿದರು.
ಮೊದಲು ಬ್ಯಾಟ್ ಆರಂಭಿಸಿದ ಆಫ್ಘಾನಿಸ್ತಾನ 20 ಓವರ್ ಗಳಲ್ಲಿ 124 ರನ್ ಒಟ್ಟುಗೂಡಿಸಿತು. ಇದನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಎಂಟು ವಿಕೆಟ್ ಗಳಿದ್ದಂತೆಯೇ ಗೆಲುವು ಸಾಧಿಸಿ ಬೀಗಿತು.
ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸುತ್ತಿದ್ದಂತೆಯೇ ಭಾರತದ ಕನಸು ಭಗ್ನವಾಗಿದೆ. ಜೊತೆಗೆ ಭಾರತ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ.