ಬಿಜೆಪಿ-ಆರ್.ಎಸ್.ಎಸ್ ಮತ್ತು ನರೇಂದ್ರ ಮೋದಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ಅಳಿಸಿಹಾಕುತ್ತ ಮೌಲ್ಯಗಳನ್ನು ಅಧಃಪತನಕ್ಕೆ ತಳ್ಳಿ ಬದ್ದತೆ ಇಲ್ಲದೆ ನಡೆದುಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಟೀಕಿಸಿದ್ದಾರೆ.
ಈ ಸರ್ಕಾರದಿಂದ ಸಂತ್ರಸ್ಥರಾಗಿರುವವರು, ರೈತರು, ಕೃಷಿ ಕಾರ್ಮಿಕರು, ಅವಕಾಶ ವಂಚಿತರು, ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿರುವ ಯುವಕರು, ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿ ಜನರು, ನಮ್ಮ ಅಣ್ಣತಮ್ಮಂದಿರು, ಅಕ್ಕತಂಗಿಯರು, ಅಂಚಿನ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ ಸೋನಿಯಾ ಗಾಂಧಿ ನೀಡಿದ ಹೇಳಿಕೆ ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪಕ್ಷದಲ್ಲಿ ಎಲ್ಲಾ ಹಂತದ ಮುಖಂಡರು ವೈಯಕ್ತಿಕ ಹಿತಾಸಕ್ತಿಗಳನ್ನು ಬಿಟ್ಟು ಒಗ್ಗೂಡಿ ಹೋಗಬೇಕು. ಶಿಸ್ತನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ರೈತರು, ಕೃಷಿ ಕಾರ್ಮಿಕರು, ಯುವಕರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು, ಬಡವರನ್ನು ಪ್ರತಿನಿಧಿಸುವಂತಹ ಹೆಚ್ಚು ಪ್ರತಿನಿಧಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ಜನರ ಸಮಸ್ಯೆಗಳ ಬಗ್ಗೆ ಹೆಚ್ಚುಹೆಚ್ಚು ಗಮನ ಸೆಳೆದು ಪರಿಹರಿಸುವ ಕೆಲಸಕ್ಕೆ ಮುಂದಾದರೆ ನಾವು ನೀಡಿದ ಭರವಸೆಗೆ ಅರ್ಥ ಬರುತ್ತದೆ. ಈ ಎಲ್ಲಾ ವಿಭಾಗಗಳಿಂದಲೂ ಪಕ್ಷಕ್ಕೆ ಹೊಸಬರನ್ನು ಕರೆತಂದು ಸಂಘಟನೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಬೇಕು. ಪಕ್ಷದ ಸಾಂಸ್ಥಿಕ ಚುನಾವಣೆಗಳನ್ನು ನಡೆಸಬೇಕು. ತರಬೇತಿ ಕಾರ್ಯಾಗಾರ ನಡೆಸಲು ಸಿದ್ದತೆ ಮಾಡಿಕೊಳ್ಳಬೇಕು. ಜನ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟ ಮಾಡಬೇಕು. ಆಗ ಮಾತ್ರ ಪಕ್ಷ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.
ಮೋದಿ ಸರ್ಕಾರ ಸುಳ್ಳುಗಳನ್ನೇ ಹೇಳಿಕೊಂಡು ಬರುತ್ತಿದೆ. ಆರ್.ಎಸ್.ಎಸ್ ಮತ್ತು ಬಿಜೆಪಿ ಜನರ ನಡುವೆ ದ್ವೇಷವನ್ನು ಬಿತ್ತುತ್ತಿದೆ. ಸುಳ್ಳುಗಳನ್ನು ಹರಡಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಇದರ ವಿರುದ್ಧ ಪ್ರಚಾರ ಮಾಡಬೇಕು. ಅವರು ಹೇಳುವ ಸುಳ್ಳುಗಳ ಬಗ್ಗೆ ಜನರ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.


