ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸಿದವರು ಯಾರು ಎಂಬುದು ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಅವರ ಹೆಸರನ್ನು ಉಲ್ಲೇಖಿಸದೆ ಹೇಳಿದರು.
ತುರುವೇಕೆರೆ ಕ್ಷೇತ್ರದಲ್ಲಿ ಕೃಷ್ಣಪ್ಪ ಗೆದ್ದರೆ ತಮಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ಎಂಎಲ್.ಸಿ ಕಾಂತರಾಜು ಮತ್ತು ಶಾಸಕ ಶ್ರೀನಿವಾಸ್ ಇಬ್ಬರೂ ಸೇರಿ ಕೃಷ್ಣಪ್ಪ ಅವರನ್ನು ಸೋಲುವಂತೆ ಮಾಡಿದರು. ಕಳೆದ ಎರಡು ವರ್ಷದಿಂದ ಶ್ರೀನಿವಾಸ್ ನನ್ನ ಮತ್ತು ದೇವೇಗೌಡರ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದೂ ಗೊತ್ತಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರು.
ಕಾಂತರಾಜ್ ಅವರು ಎಲ್ಲೋ ಇದ್ದರು. ಅವರನ್ನು ತುಮಕೂರು ಜಿಲ್ಲೆಗೆ ಕರೆತಂದೆ ಎಂಎಲ್.ಸಿ ಮಾಡಿದೆವು. ಪ್ರತಿಫಲವಾಗಿ ತುರುವೇಕೆರೆ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಚುನಾವಣೆ ಸಮಯದಲ್ಲಿ ಕಾಂತರಾಜು ತಮ್ಮ ಸಂಬಂಧಿ ನಾರಾಯಣಗೌಡ ಎಂಬುವರನ್ನು ಕಣಕ್ಕೆ ಇಳಿಸಿ ಸೋಲಿಸಿದರು. ಇವರೆಲ್ಲಾ ನಿಷ್ಠಾವಂತರು ದೇವೇಗೌಡರಿಗೆ ಎಷ್ಟು ಟೋಪಿ ಹಾಕಿದ್ದಾರೆ ಎಂಬುದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ತುಮಕೂರು ಜಿಲ್ಲೆಯಲ್ಲಿ ಕುಂಚಿಟಿಗ ಸಮುದಾಯವರನ್ನು ಮಂತ್ರಿ ಮಾಡಬೇಕೆಂಬುದು ದೇವೇಗೌಡರ ಒತ್ತಾಯವಾಗಿತ್ತು. ಆದರೆ ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಮಂತ್ರಿ ಮಾಡಿದ್ದು ನನ್ನ ತಪ್ಪೇ? ನಾನು ಯಾವತ್ತೂ ಅವರಿಗೆ ಮೋಸ ಮಾಡಿಲ್ಲ. ಆದರೂ ದೇವೇಗೌಡರ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.