ಲಖಿಂಪುರಖೇರಿ ರೈತರ ಹತ್ಯೆಯನ್ನು ಖಂಡಿಸಿ ಮಹಾ ವಿಕಾಸ ಅಘಾಡಿ ಕರೆ ನೀಡಿರುವ ಮಹಾರಾಷ್ಟ್ರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರಿಗಳು ಅಂಗಡಿಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಂಬೈನ ಹಲವೆಡೆ ಅಪರಿಚಿತರು ಬಿಇಎಸ್.ಟಿ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಬಸ್ ಗಳ ಗಾಜುಗಳು ಒಡೆದು ಹೋಗಿವೆ. ಹಾಗಾಗಿ ಬಿಇಎಸ್.ಟಿ. ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬಂದ್ ಪರಿಣಾಮವಾಗಿ ಪ್ರಯಾಣಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಥಾಣೆಯಲ್ಲಿ ಪ್ರಯಾಣಿಕರು ಆಟೋಗಳಿಗಾಗಿ ಉದ್ದನೆಯ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಪ್ರಯಾಣಿಕರು ತಲುಪಬೇಕಾದ ಸ್ಥಳಗಳಿಗೆ ಹೋಗಲು ಆಟೋಗಳನ್ನು ಆಶ್ರಯಿಸಿದ್ದಾರೆ, ಕಲ್ಲು ತೂರಾಟ ನಡೆಸಿರುವುದರಿಂದ ಆಟೊ ಸಂಚಾರವೂ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಮಹಾರಾಷ್ಟ್ರದ ಬೀದಿಬೀದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಜ್ಯ ಎನ್.ಸಿ.ಪಿ ಮುಖ್ಯಸ್ಥ ಜಯಂತ್ ಪಾಟೀಲ್, ಎನ್.ಸಿಪಿ ನಾಯಕಿ ಸುಪ್ರಿಯಾ ಸೂಲೆ, ಸಚಿವ ನವಾಬ್ ಮಲ್ಲಿಕ್ ಮತ್ತು ಇತರರು ದಕ್ಷಿಣ ಮುಂಬೈನ್ ಹುತಾತ್ಮ ಚೌಕದಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಮಧ್ಯ ಕಾಂಗ್ರೆಸ್ ಅಧ್ಯಕ್ಷ ನಾನ ಪಟೊಲೆ ಮತ್ತು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗ್ತಾಪ್ ಅವರು ಮುಂಬೈನ ರಾಜಭವನದ ಹೊರಗೆ ಮೌನವ್ರತ ನಡೆಸಲಿದ್ದಾರೆ.