ಕೇರಳ ಮತ್ತು ಗೋವಾ ರಾಜ್ಯದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇರಳದ ಹಿರಿಯ ಕಾಂಗ್ರೆಸ್ ನಾಯಕ ವಿ.ಎಂ ಸುಧೀರನ್ ಎಐಸಿಸಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಕಳೆದ ವಾರ ಕೆಪಿಸಿಸಿಯ ಉನ್ನತ ಸಮಿತಿ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರು. ಈಗ ಎಐಸಿಸಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಮತ್ತು ಸುಧೀರನ್ ನಡುವೆ ಶೀತಲಸಮರ ನಡೆಯುತ್ತಿತ್ತು. ಇಬ್ಬರ ನಡುವೆ ಬಹಿರಂಗವಾಗಿ ಆರೋಪ-ಪ್ರತ್ಯಾರೋಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸುಧೀರನ್ ರಾಜಿನಾಮೆ ನೀಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸತೀಶನ್ ಅವರು ಸುಧೀರನ್ ರಾಜಕೀಯ ವ್ಯವಹಾರಗಳ ಸಮಿತಿಗೆ ನೀಡಿರುವ ರಾಜಿನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ಆದರೆ ರಾಷ್ಟ್ರೀಯ ನಾಯಕರ ನಡವಳಿಕೆಯಿಂದ ಅವಮಾನಕ್ಕೆ ಒಳಗಾಗಿರುವ ಸುಧೀರನ್ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಗೋವಾದ ಕಾಂಗ್ರೆಸ್ ನಾಯಕ ಉಜ್ಹಿನೋ ಫೆಲರಿಯೋ ಕೂಡ ಪಕ್ಷಕ್ಕೆ ರಾಜಿನಾಮೆ ನೀಡಿದ್ದು ತೃಣಮೂಲ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
‘ನಾನು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನಾನು ಮುಂದೆಯೂ ಕಾಂಗ್ರೆಸ್ ಸದಸ್ಯನಾಗಿಯೇ ಮುಂದುವರೆಯುತ್ತೇನೆ. ಅದು ತೃಣಮೂಲ ಕಾಂಗ್ರೆಸ್ ಕುಟುಂಬವನ್ನು ಸೇರುತ್ತಿದ್ದೇನೆ. ಮಮತಾ ಬ್ಯಾನರ್ಜಿ ನೇರ ವ್ಯಕ್ತಿ. ಬಿಜೆಪಿ ವಿರುದ್ದ ಗಟ್ಟಿಯಾಗಿ ನಿಲ್ಲಬಲ್ಲ ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರ ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ’ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಕಾರ್ಯತಂತ್ರ ಬಂಗಾಳದಲ್ಲಿ ಗೆಲ್ಲಲು ಸಹಕಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ 200 ಸಭೆ ಮಾಡಿದರು. ಗೃಹ ಸಚಿವ ಅಮಿತ್ ಶಾ 250 ಸಭೆಗಳನ್ನು ಮಾಡಿದರು. ಕೇಂದ್ರ ಸರ್ಕಾರ ಇಡಿ ಮತ್ತು ಸಿಬಿಐ ದಾಳಿ ನಡೆಸಿತು. ಆದರೂ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದರು ಎಂದು ಕೊಂಡಾಡಿದ್ದಾರೆ.