ಸಿಪಿಐ ನಾಯಕ ಕನ್ಹಯ್ಯಕುಮಾರ್ ಮತ್ತು ದಲಿತ ಹೋರಾಟಗಾರ ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರು ಮುಂದಿನ ವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಸೆಪ್ಟೆಂಬರ್ 28ರಂದು ಭಗತ್ ಸಿಂಗ್ ಜನ್ಮದಿನ. ಆ ದಿನವೇ ಬೃಹತ್ ಸಮಾರಂಭದಲ್ಲಿ ಈ ಇಬ್ಬರು ಯುವ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾಂಗ್ರೆಸ್ ತಯಾರಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್.ಡಿ. ಟಿವಿ ವರದಿ ಮಾಡಿದೆ.
ಜಿಗ್ನೇಶ್ ಮೇವಾನಿ ದಲಿತ ನಾಯಕ. ಗುಜರಾತ್ ರಾಜ್ಯದ ವಡ್ಗಾಮ್ ಕ್ಷೇತ್ರದ ಹಾಲಿ ಶಾಸಕ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಸಿದ್ದತೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕನ್ಹಯ್ಯ ಕುಮಾರ್ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ. ಈ ಯುವ ನಾಯಕನ ಹಿಂದೆ ಹಲವು ಮಂದಿ ಎಡಪಕ್ಷಗಳ ಮುಖಂಡರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಜಿಗಿಯಲು ಮುಂದಾಗಿದ್ದಾರೆ.
ಜಿಗ್ನೇಶ್ ಮೇವಾನಿ ಮತ್ತು ಕನ್ಹಯ್ಯಕುಮಾರ್ ಸೇರ್ಪಡೆ ಕಾಂಗ್ರೆಸ್ ಗೆ ಬಲತಂದುಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಯುವ ಮತ್ತು ಡೈನಾಮಿಕ್ ಮುಖಗಳನ್ನು ಪರಿಚಯಿಸುವ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ.
ಕನ್ಹಯ್ಯಕುಮಾರ್ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ತವರು ಬೆಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಗಿರಿರಾಜ್ ಸಿಂಗ್ ಎದುರು ಸೋತಿದ್ದ ಕನ್ಹಯ್ಯ ಕುಮಾರ್ ಈಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಚಿಂತನಾಶೀಲ, ಸೂಕ್ಷ್ಮ ಮನಸಿನ ಈ ಯುವನಾಯಕರ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಲಿದೆ ಎಂದು ವಿಶ್ಲೇಷಣೆ ನಡೆಯುತ್ತಿದೆ.