ಪಂಜಾಬ್ ಮುಖ್ಯಮಂತ್ರಿಯಾಗಿ ಚೆನ್ನಿ ರಾಜ್ಯಪಾಲರನ್ನು ಭೇಟಿಯಾಗಿ ಸಚಿವ ಪಟ್ಟಿಯನ್ನು ನೀಡಿದ್ದು, ಭಾನುವಾರ ಬೆಳಗ್ಗೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಐವರು ಶಾಸಕರನ್ನು ಕೈಬಿಟ್ಟು, 7 ಮಂದಿಗೆ ಚೆನ್ನಿ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸೆಪ್ಟೆಂಬರ್ 24ರಂದು ದೆಹಲಿಯಲ್ಲಿ ಮುಖ್ಯಮಂತ್ರಿ ಚೆನ್ನಿ ಅವರು ಎಐಸಿಸಿ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಸ್ತುವಾರಿ ಹರೀಶ್ ರಾವತ್, ಹರೀಶ್ ಚೌದರಿ, ಅಜಯ್ ಮಾಕನ್ ಜೊತೆ ಚರ್ಚಿಸಿದ ಬಳಿಕ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಆರೋಗ್ಯ ಸಚಿವ ಬಲಬೀರ್ ಸಿಧು, ಮಾಜಿ ಕಂದಾಯ ಸಚಿವ ಗುರುಪ್ರೀತ್ ಸಿಂಗ್ ಕಂಗಾರ್, ಮಾಜಿ ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ, ಮಾಜಿ ಸಮಾಜ ಕಲ್ಯಾಣ ಸಚಿವ ಸಾಧು ಸಿಂಗ್ ಧರ್ಮಸೊತ್, ಮಾಜಿ ಕ್ರೀಡಾ ಸಚಿವ ಗುರುಮಿತ್ ಸಿಂಗ್ ಸೋಧಿ ಅವರನ್ನು ಚೆನ್ನಿ ಸಂಪುಟದಿಂದ ಕೈಬಿಡಲಾಗಿದೆ.
ಮಾಜಿ ನೀರಾವರಿ ಸಚಿವರಾಗಿದ್ದ ರಾನಾ ಗುರುಜಿತ್ ಸಿಂಗ್ ಮರಳುಗಣಿಗಾರಿಕೆ ಹಂಚಿಕೆಯ ಹಗರಣದಲ್ಲಿ ಭಾಗಿಯಾಗಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದರು. ಈಗ ಚೆನ್ನಿ ಸಂಪುಟಕ್ಕೆ ಗುರುಜಿತ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರಗತ ಸಿಂಗ್ ಸಂಪುಟ ಸೇರ್ಪಡೆಗೆ ಮುಖ್ಯಮಂತ್ರಿ ಚೆನ್ನಿ ವಿರೋಧ ವ್ಯಕ್ತಪಡಿಸಿದ್ದು ಪಕ್ಷದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಒತ್ತಡದ ಮೇರೆಗೆ ಪರಗತ ಸಿಂಗ್ ಅವರಿಗೆ ನೂತನ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಈ ಬಾರಿ ಮಾಜಿ ಹಣಕಾಸು ಸಚಿವ ಮನಪ್ರೀತ್ ಸಿಂಗ್ ಬಾದಲ್, ಬ್ರಹ್ಮ ಮೊಹಿಂದ್ರ, ಸುಖಬಿಂದರ್ ಸರ್ಕಾರಿಯ, ತ್ರಿಪತ್ ರಾಜಿಂದರ್ ಸಿಂಗ್ ಬಾಜ್ವಾ, ವಿಜಯ ಇಂದರ್ ಸಿಂಗ್ಲಾ, ಅರುಣ ಚೌದರಿ, ರಾಜಿ ಸುಲ್ತಾನ್, ಭರತ್ ಭೂಷಣ್ ಆಸು ಅವರನ್ನು ನೂತನ ಸಂಪುಟದಲ್ಲೂ ಉಳಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.