ವಿಧಾನಮಂಡಲದ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಸಿ ರಾಜ್ಯ ಸರ್ಕಾರದ ತೀರ್ಮಾನ ಸಂಸದೀಯ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ದವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಟೀಕಿಸಿದ್ದಾರೆ
ಕರ್ನಾಟಕದ ಇತಿಹಾಸಲದಲ್ಲಿ ಈ ರೀತಿಯ ಉದಾಹರಣೆ ನಡೆದಿರಲಿಲ್ಲ. ಈ ನಡೆಯ ಮೂಲಕ ಕೆಟ್ಟ ಪರಂಪರೆಯೊಂದನ್ನು ಆರಂಭಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಇರುವುದು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ. ಲೋಕಸಭೆ ಸ್ಪೀಕರ್ ಕರೆಸುವ ಮೂಲಕ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದು ಪ್ರಜಾತಂತ್ರ ವ್ಯವಸ್ಥೆಯ ಅಣಕ. ಲೋಕಸಭೆ ಮತ್ತು ವಿಧಾನಸಭೆ ಎರಡೂ ಕೂಡ ಜನಪ್ರತಿನಿಧಿಗಳ ಸಭೆ. ಒಂದು ಹೆಚ್ಚು, ಒಂದು ಕಡಿಮೆಯಲ್ಲ. ಎರಡೂ ಕೂಡಾ ಭಾರತ ಸಂವಿಧಾನದ ಪ್ರಕಾರವೇ ನಡೆಯುತ್ತವೆ. ಹೀಗಿದ್ದಾರೆ. ವಿಧಾನಮಂಡಲದಲ್ಲಿ ಲೋಕಸಭೆ ಸ್ಪೀಕರ್ ಕರೆಯಿಸುವ ಔಚಿತ್ಯವಾದರೂ ಏನಿತ್ತು? ಈ ಸಂಪ್ರದಾಯ ಹುಟ್ಟುಹಾಕುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಒಕ್ಕೂಟ ಸರ್ಕಾರ ಭಾರತ ಗಣರಾಜ್ಯದ ಒಕ್ಕೂಟ ತತ್ವಗಳನ್ನು ಒಂದೊಂದಾಗಿ ಮುರಿಯುತ್ತ ಬರುತ್ತಿದೆ. ಎಲ್ಲಾ ವಿಷಯದಲ್ಲೂ ಏಕತ್ವವನ್ನು ಹೇರುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಬರುತ್ತಿದೆ ಎಂದು ಟೀಕಿಸಿದ್ದಾರೆ.