ದೇಶದ ಜಿಡಿಪಿ ಕುಸಿದುಹೋಗಿದ್ದರೆ, ನಿರುದ್ಯೋಗ ಪ್ರಮಾಣ ಅಧಿಕಗೊಂಡಿದರೆ. ಇಂತಹ ಕ್ಲಷ್ಟ ಸನ್ನಿವೇಶದಲ್ಲೂ ಚುನಾವಣಾ ಬಾಂಡ್ ನಲ್ಲಿ ಎಲ್ಲಾ ಪಕ್ಷಗಳ ಆದಾಯ ಕಡಿಮೆಯಾಗುತ್ತಿದ್ದರೂ ಬಿಜೆಪಿ ಆದಾಯ ಊಹೆಗೂ ಮೀರಿ ಹೆಚ್ಚಳವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೋಯ್ಲಿ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಎಸ್.ಟಿ ಮತ್ತು ನೋಟು ಅಮಾನ್ಯೀಕರಣದಿಂದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಇಂದಿಗೂ ಆ ಕಷ್ಟದಿಂದ ಹೊರಬರಲು ಆಗಿಲ್ಲ. ಆದರೂ ದೇಶದ ಶೇ.50ರಷ್ಟು ಸಂಪತ್ತು ಕೇವಲ 10 ಮಂದಿ ಶ್ರೀಮಂತರ ಕೈಯಲ್ಲಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಭರವಸೆ ನೀಡಿದರು. ಜನರನ್ನು ಅಪಹಾಸ್ಯಕ್ಕೆ ಈಡುಮಾಡಿದರು. ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ದೇಶದ್ರೋಹ ಪ್ರಕರಣಗಳು 300ಪಟ್ಟು ಹೆಚ್ಚಾಗಿವೆ. ಸುಪ್ರೀಂಕೋರ್ಟ್ ಇದರ ದುರ್ಬಳಕೆಗೆ ಛೀಮಾರಿ ಹಾಕಿದೆ ಎಂದು ತಳಿಸಿದರು.
ಈಗ ಹಣ ಮತ್ತು ಜಾತಿ ಚುನಾವಣೆಯಲ್ಲಿ ಪ್ರಾಧಾನ್ಯತೆ ಪಡೆದು ವಿಕೃತ ರಾಜಕಾರಣ ಬೆಳೆದಿದೆ. ಇದಕ್ಕೆ ಕಾರಣ ಬಿಜೆಪಿ. ಅವರು ಬ್ರಿಟಿಷರಂತೆ ಮತಗಳು, ಧರ್ಮಗಳ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದು ಯಾವಾಗಾಲೂ ಯಶಸ್ವಿಯಾಗುವುದಿಲ್ಲ. ಪ್ರಧಾನಿ ಖ್ಯಾತಿ ಕುಸಿತವೇ ಇದಕ್ಕೆ ಸಾಕ್ಷಿ ಎಂದು ಟೀಕಿಸಿದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾನು ಕಾನೂನು ಸಚಿವ ಆಗಿದ್ದಾಗ ಒಂದು ಸಮಿತಿ ಮಾಡಿದ್ದೆವು. ನಂತರ 2014ರಲ್ಲಿ ಲೋಕಪಾಲ ಮಸೂದೆ ಜಾರಿಗೆ ತಂದಿದ್ದೆವು. ನಾವು ಅದಕ್ಕೆ ಬದ್ದವಾಗಿದ್ದೆವು. ಆದರೆ 2017ರವರೆಗೆ ಲೋಕಪಾಲರ ನೇಮಕ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತ್ತು. ನಂತರ ಲೋಕಪಾಲರನ್ನು ನೇಮಕ ಮಾಡಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಲೋಕಾಯುಕ್ತರೂ ಇಲ್ಲ. ಕೇಂದ್ರದಲ್ಲಿ ಲೋಕಪಾಲರೂ ಇಲ್ಲ. ಭ್ರಷ್ಟಾಚಾರ ಲಾಭ ಪಡೆದು ಅಧಿಕಾರಕ್ಕೆ ಬಂದ ಮೋದಿ, ಕೇಜ್ರಿವಾಲ್ ಇಂದು ಭ್ರಷ್ಟಾಚಾರ ನಡೆಸುತ್ತಿದ್ದರೂ ಮೌನವಾಗಿದ್ದಾರೆ ಎಂದು ಮೋಯ್ಲಿ ದೂರಿದರು.