ಮಹಾರಾಷ್ಟ್ರ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳ ನಡುವೆ ಪತ್ರ ಸಮರ ನಡೆದಿದೆ. ಸಾಕಿನಾಕ ಅತ್ಯಾಚಾರ-ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರು ಬರೆದ ಪತ್ರಕ್ಕೆ ಖಾರವಾಗಿ ಪತ್ರ ಬರೆದಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ “ನೀವು ರಾಜಕೀಯ ಕಾರ್ಯಕರ್ತರ ಆತ್ಮವನ್ಹು ಹೊಂದಿದ್ದೀರಿ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ನಿಮ್ಮ ಸ್ವಂತ ರಾಜ್ಯ ಜಾರ್ಖಂಡ್ ನಲ್ಲಿ ಅತ್ಯಾಚಾರ, ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಅಲ್ಲಿನ ಸರ್ಕಾರದ ಅಂಕಿಅಂಶಗಳೇ ಸ್ಪಷ್ಟಪಡಿಸುತ್ತವೆ. ಹಾಗೆಂದು ಅಲ್ಲಿ ವಿಶೇಷ ಅಧಿವೇಶನ ಕರೆಯಲು ಹೇಳುತ್ತೀರಾ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಸಾಕಿನಾಕ ಮಹಿಳೆಯ ಅತ್ಯಾಚಾರ-ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವಿಧಾನಸಭೆಯ ವಿಶೇಷ ಅಧಿವೇಶಣವನ್ನು ಕರೆಯುವಂತೆ ರಾಜ್ಯಪಾಲರು ಉದ್ದವ್ ಠಾಕ್ರೆಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಉಲ್ಲೇಖಿಸಿರುವ ಉದ್ದವ್ ಠಾಕ್ರೆ ರಾಜ್ಯಪಾಲರು ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯಪಾಲರ ಪತ್ರ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವಿಧಾನಗಳಿಗೆ ಹಾನಿ ಉಂಟುಮಾಡುತ್ತದೆ. ನೀವು ಯಾವ ಕಾರಣಕ್ಕೆ ಪತ್ರ ಬರೆದಿದ್ದೀರಿ. ನಿಮ್ಮ ಭಾವನೆಗಳೇನು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನೀವು ರಾಜಕೀಯ ಕಾರ್ಯಕರ್ತರ ಆತ್ಮ ಹೊಂದಿದ್ದೀರಿ. ಆದ್ದರಿಂದ ಇಂತಹ ಸೂಚನೆಗಳು ನಿಮ್ಮಿಂದ ಬಂದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಕಿನಾಕದಲ್ಲಿ 34 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯ್ಯಲಾಗಿತ್ತು. ಇಂತಹ ಘಟನೆಗಳನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೂ ನೀವು ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ಪತ್ರ ಬರೆದಿದ್ದೀರಿ ಎಂದು ಆರೋಪಿಸಿದ್ದಾರೆ.
“ನಿಮ್ಮ ತವರುರಾಜ್ಯ ಉತ್ತರಖಂಡ ದೇವರಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲಿ ಮಹಿಳೆಯರ ಮೇಲಿನ ಹಲ್ಲೆಗಳು 150ರಷ್ಟು ಹೆಚ್ಚಳವಾಗಿವೆ. ಅಲ್ಲಿ ನೀವು ವಿಶೇಷ ಅಧಿವೇಶನ ಕರೆಯಲು ಕೇಳಬಲ್ಲಿರಾ ಎಂದು ಉದ್ದವ್ ಠಾಕ್ರೆ ಪ್ರಶ್ನಿಸಿದ್ದಾರೆ.
ಗುಜರಾತ್ ನಲ್ಲಿ ಪೊಲೀಸರ ಪ್ರಕಾರ ಪ್ರತಿದಿನ 14 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಗುಜರಾತ್ ನಲ್ಲಿ ಒಂದು ತಿಂಗಳು ವಿಧಾನಸಭೆ ಅಧಿವೇಶನ ಕರೆಯಲು ಸಲಹೆ ಮಾಡುತ್ತೀರ ಎಂದು ಕೇಳಿದ್ದಾರೆ.
ಉತ್ತರಖಂಡದಲ್ಲಿ ಸರ್ಕಾರದ ಅಂಕಿಅಂಶಗಳೇ ಹೇಳುವಂತೆ ಮಹಿಳೆಯರ ಮೇಲೆ ದಾಳಿಗಳು ನಡೆಯುತ್ತಿವೆ. ಹಾಗೆಂದು ಬಿಜೆಪಿ ವಿಶೇಷ ಅಧಿವೇಶನ ಕರೆಯಲು ಒತ್ತಾಯಿಸುತ್ತದೆಯೇ ಎಂದು ಉದ್ದವ್ ಠಾಕ್ರೆ ಹೇಳಿಕೆ ಉಲ್ಲೇಖಿಸಿ ಎನ್.ಡಿ. ಟಿವಿ ವರದಿ ಮಾಡಿದೆ.