ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಮತ್ತು ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸೈಕಲ್ ಜಾಥಾದ ಮೂಲಕ ಪ್ರತಿಭಟನೆ ನಡೆಸಿದರು. ಬೆಲೆ ಇಳಿಕೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರಸ್ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ, ಹಿರಿಯ ಮುಖಂಡ ರಾಮಲಿಂಗಾರೆಡ್ಡಿ, ಶಾಸಕ ರಿಜ್ವನ್ ಹರ್ಷದ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಸೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ನಮಗೆ ಮುಖ್ಯವಲ್ಲ, ನಮ್ಮ ರಾಜ್ಯದ ಜನರಿಗೆ ಅನುಕೂಲವಾಗಬೇಕು, ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಕಡಿತ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಪಿಕ್ ಪಾಕೇಟ್ ಮಾಡುತ್ತಿದೆ ಎಂದು ದೂರಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್ ಗೆ ಕಡಿಮೆ ಇದೆ. ಆದರೆ ದೇಶದಲ್ಲಿ ಡಿಸೆಲ್ ಮತ್ತು ಪೆಟ್ರೋಲ್ ಬೆಲೆ ಏರುತ್ತಲೇ ಇದೆ. ಬೇರೆ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ. ಹಾಗಾಗಿ ಏರಿಕೆಯಾಗಿರುವ ಬೆಲೆಗಳನ್ನು ಶೇ.20ರಷ್ಟು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೊಳ್ಳುವ ಶಕ್ತಿಯೂ ಇಲ್ಲ. ಹಣವೂ ಇಲ್ಲದೆ ತಾಳಿಯನ್ನು ಮಾರಿ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊವಿಡ್ ನಿಂದ ಮರಣ ಹೊಂದಿದ ಕುಟುಂಬದವರಿಗೆ ಪರಿಹಾರವನ್ನು ನೀಡಿಲ್ಲ. ಮೃತರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ. ರೈತರು ನಷ್ಟ ಅನುಭವಿಸಿದ್ದರೂ ಅವರನ್ನು ಕೇಳುವವರೇ ಇಲ್ಲ ಎಂದು ಹೇಳಿದರು.
ಕೊರೊನದಿಂದ ಬೆಲೆಗಳು ಗಗನಕ್ಕೆ ಏರಿವೆ. ಹಾಗೆಂದು ಸಂಬಳ ಹೆಚ್ಚು ಮಾಡಿಲ್ಲ. ಪಿಂಚಣಿಯನ್ನೂ ಹೆಚ್ಚಿಸಿಲ್ಲ. ದೇಶ/ರಾಜ್ಯದಲ್ಲಿ ಅನಾಹುತಗಳು ನಡೆಯುತ್ತಲೇ ಇವೆ. ಇವುಗಳನ್ನು ಕೇಳಲು ನಾವು ಹೋರಾಟ ಮಾಡುತ್ತಿದ್ದೇವೆ. ಸದನದ ಒಳಗೆ ಮತ್ತು ಹೊರಗೆ ಜನರ ಪರವಾಗಿ ದನಿ ಎತ್ತುತ್ತೇವೆ ಎಂದು ತಿಳಿಸಿದರು.
ಬೆಲೆ ಏರಿಕೆ ವಿರುದ್ಧ ಎತ್ತಿಗಾಡಿ ಮೆರವಣಿಗೆ ನಡೆಸಿದ್ದೇವೆ. ಈಗ ಸೈಕಲ್ ಜಾಥಾ ಮಾಡಿದ್ದೇವೆ. ಆದರೂ ಬೆಲೆಗಳು ಏರಿಕೆಯಾಗುತ್ತಿದ್ದು ಜನರು ಸುಮ್ಮನೆ ಕೂರದೆ ಪ್ರತಿಭಟನೆ ನಡೆಸಬೇಕು. ನಾವು ಕೂಡ ಜನರ ಪರವಾಗಿ ಹೋರಾಡುತ್ತೇವೆ. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜನತೆ ಕರೆ ನೀಡಿದರು.