ಪೆಟ್ರೋಲ್, ಡಿಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯನ್ನು ವಿರೋಧಿಸಿ ನಾನು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿನ ಬಂಡಿಯಲ್ಲಿ ತೆರಳಿ ಸೋಮವಾರದಿಂದ ಆರಂಭವಾಗಲಿರುವ ವಿಧಾನಸೌಧಕ್ಕೆ ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ತೈಲ ಮತ್ತು ಗ್ಯಾಸ್ ಬೆಲೆಯನ್ನು ವಿರೋಧಿಸಿ ಎತ್ತಿನಬಂಡಿಯಲ್ಲಿ ಅಧಿವೇಶನಕ್ಕೆ ಹೋಗುವ ಮೂಲಕ ಪ್ರತಿಭಟನೆ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಸಂಚಾರಕ್ಕೆ ತೊಂದರೆಯಾಗದಂತೆ 2-3 ಎತ್ತಿನ ಬಂಡಿಯಲ್ಲಿ ತೆರಳುತ್ತೇವೆ. ನಾವು ಬಂಡಿಯಲ್ಲಿ ತೆರಳುವುದರಿಂದ ಯಾರೊಬ್ಬರಿಗೂ ತೊಂದರೆಯಾಗಬಾರದು. ಸೆಪ್ಟೆಂಬರ್ 13ರಂದು ಬೆಳಗ್ಗೆ 9.30ಕ್ಕೆ ಎತ್ತಿನಬಂಡಿಯಲ್ಲಿ ವಿಧಾನಸೌಧಕ್ಕೆ ತೆರಳುತ್ತೇವೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಶ್ರೀಮಂತ ಪಾಟೀಲ್, ಪಕ್ಷ ಸೇರಿದರೆ ಹಣ ನೀಡುವುದಾಗಿ ಬಿಜೆಪಿ ಮುಖಂಡರು ಹೇಳಿದ್ದರು ಎಂಬ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮಾಜಿ ಸಚಿವರ ಹೇಳಿಕೆಯ ಹಿನ್ನೆಲೆಯಲ್ಲಿ ಎಸಿಬಿ ಸ್ವಯಂ ಪ್ರೇರಿತವಾಗಿ FIR ದಾಖಲಿಸಬೇಕು ಎಂದು ಒತ್ತಾಯಿಸಿದರು.
ಹಣದ ಆಮಿಷವೊಡ್ಡಿದವರು ಯಾರೆಂಬ ಬಗ್ಗೆ ಕೇಸು ದಾಖಲು ಮಾಡಬೇಕು. ಈ ಸಂಬಂಧ ತನಿಖೆ ನಡೆಸಬೇಕು ಎಂದು ಹೇಳಿದ ಡಿ.ಕೆ.ಶಿವಕುಮಾರ್, ಶುದ್ದ ಆಡಳಿತ ಮಾಡಿದ್ದೇವೆ ಎಂದು ಹೇಳಿದವರು ಇದಕ್ಕೆ ಏನು ಉತ್ತರ ಕೊಡುತ್ತಾರೆ. ಇಂತಹ ದನಿ ಸದನದಲ್ಲೂ ಪ್ರಸ್ತಾಪವಾಗಿತ್ತು. ಈಗ ಸದನದ ಹೊರಗೂ ವ್ಯಕ್ತವಾಗಿದೆ. ಆದ್ದರಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.