ಉತ್ತರ ಪ್ರದೇಶದ ಬಿಜನೂರು ರೈಲ್ವೆ ಹಳಿಯ ಪಕ್ಕದ ಸೀಮೆಂಟ್ ಪಟ್ಟಿಯ ಮೇಲೆ ರಾಷ್ಟ್ರಮಟ್ಟದ ಖೊ ಖೊ ಆಟಗಾರ್ತಿ ಮೃತದೇಹ ಪತ್ತೆಯಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಈ ಆಟಗಾರ್ತಿ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. “ಇದು ಅತ್ಯಾಚಾರ ಮಾಡಿ ಕೊಲೆಗೈಯ್ಯಲಾಗಿದೆ” ಎಂದು ಮೃತ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಆಕೆ ಧರಿಸಿದ್ದ ಬಟ್ಟೆಗಳು ಹರಿದುಹೋಗಿವೆ. ಮುಖ ಗುರುತು ಸಿಗದಂತೆ ಜಜ್ಜಿ ಹಾಕಲಾಗಿದೆ. ಹಲ್ಲುಗಳು ಮುರಿದು ಹೋಗಿವೆ. ಕುತ್ತಿಗೆಯಲ್ಲಿ ಗಾಯದ ಕಲೆಗಳು ಇರುವ ಸ್ಥಿತಿಯಲ್ಲಿ ಖೊ ಖೊ ಆಟಗಾರ್ತಿಯ ಮೃತದೇಹ ಕಂಡು ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದಲಿತ ಯುವತಿ ಉತ್ತಮ ಖೋ ಖೋ ಆಟಗಾರ್ತಿ. ಐದು ವರ್ಷದಲ್ಲಿ ಎರಡು ಬಾರಿ ರಾಷ್ಟ್ರಮಟ್ಟದ ಖೊ ಖೊ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಕ್ರೀಡಾಧಿಕಾರಿ ಅರವಿಂದ್ ಅಹ್ಲವಾಟ್ ಹೇಳಿದ್ದಾರೆ.
“ಮಗಳು ನನ್ನ ಕುಟುಂಬಕ್ಕೆ ಬೇಕಾಗಿದ್ದಳು. ಆದರೆ ಕ್ರೀಡೆಯಲ್ಲಿ ತರಬೇತಿ ಪಡೆದಳು. ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಪದವಿಯನ್ನು ಪಡೆದಳು. ಬಿಜನೂರು ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಕೊರೊನ ಸೋಂಕು ವ್ಯಾಪಿಸಿದ್ದರಿಂದ ಏಪ್ರಿಲ್ ನಲ್ಲಿ ಕೆಲಸ ಕಳೆದುಕೊಂಡಿದ್ದಳು” ಎಂದು ತಂದೆ ನೋವು ತೋಡಿಕೊಂಡಿದ್ದಾರೆ.
“ಶುಕ್ರವಾರ ನನ್ನ ತಂಗಿ ಖಾಸಗಿ ಶಾಲೆಯಲ್ಲಿ ಕೆಲಸಕ್ಕಾಗಿ ಸಂದರ್ಶಕ್ಕೆ ಹೋಗಿದ್ದಳು. ಅಪರಾಹ್ನ 3ಗಂಟೆಯಾದರೂ ಮನೆಗೆ ಬರಲಿಲ್ಲ. ಆಕೆಯ ಬರುವಿಕೆಗಾಗಿ ಎದುರು ನೋಡಿದೆವು. ಅಷ್ಟು ಹೊತ್ತಿಗೆ ಪಕ್ಕದವರು ” ನಿನ್ನ ತಂಗಿ ರೈಲ್ವೆ ಹಳಿಯ ಪಕ್ಕದಲ್ಲಿ ಅಸ್ವಸ್ಥರಾಗಿ ಬಿದ್ದಿರುವ ಮಾಹಿತಿ ತಿಳಿಸಿದರು. ನಾವು ಸ್ಥಳಕ್ಕೆ ಹೋದೆವು. ತಂಗಿಯನ್ನು ನೋಡಿದೆವು. ಪಕ್ಕದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿದ್ದವು” ಎಂದು ಮೃತಳ ಸೋದರಿ ಹೇಳಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದರು. ಘಟನೆ ಜರುಗಿರುವ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಬಿಎಸ್.ಪಿ ಮುಖಂಡರ ಮಧ್ಯಪ್ರವೇಶದ ನಂತರ ಪೊಲೀಸರು ಐಪಿಸಿ 302 ಮತ್ತು 376ನೇ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷಾ ವರದಿಯಲ್ಲಿ ‘ಕತ್ತುಹಿಸುಕಿರುವುದು’ ಬಿಟ್ಟರೆ ಬೇರೆ ಏನೂ ನಡೆದಿಲ್ಲ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೃತಳ ಸೋದರಿ “ಇದು ದಿಕ್ಕುತಪ್ಪಿಸುವ ತಂತ್ರ. ತಂಗಿಯ ಮೇಲೆ ಅತ್ಯಾಚಾರ ಮಾಡಿದ್ದು ಯಾವುದೇ ಅನುಮಾನವಿಲ್ಲ. ಬಟ್ಟೆ ಹರಿದು ಹಾಕಿರುವುದು, ಕುತ್ತಿಗೆಯ ಸುತ್ತ ಗಾಯಗಳಾಗಿರುವುದು ಅತ್ಯಾಚಾರಕ್ಕೆ ಸಾಕ್ಷಿಯಾಗಿವೆ” ಎಂದು ಆರೋಪಿಸಿದ್ದಾರೆ.