ಸ್ವತಂತ್ರ ಮಾಧ್ಯಮ ನ್ಯೂಸ್ ಲಾಂಡ್ರಿ ಮತ್ತು ನ್ಯೂಸ್ ಕ್ಲಿಕ್ ಡಿಜಿಟಲ್ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸರ್ವೇ ನೆಪದಲ್ಲಿ ದಾಳಿ ನಡೆಸಿರುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯ ಖಂಡಿಸಿದೆ. ಇದು ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿದೆ.
ಸೆಪ್ಟೆಂಬರ್ 10ರಂದು ನ್ಯೂಸ್ ಲಾಂಡ್ರಿ ಮತ್ತು ನ್ಯೂಸ್ ಕ್ಲಿಕ್ ಡಿಜಿಟಲ್ ಸಂಸ್ಥೆಗಳ ಕಚೇರಿಗೆ ತೆರಳಿ ಸರ್ವೆ ನಡೆಸುವುದಾಗಿ ಹೇಳಿದ್ದರು. ಇದು ಆದಾಯ ತೆರಿಗೆ ದಾಳಿಯಲ್ಲ ಎಂದು ಸ್ಪಷ್ಪಪಡಿಸಿದ್ದರು. ಆದರೆ ಎರಡೂ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಹಣಕಾಸು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಸ್ವತಂತ್ರ ಮಾಧ್ಯಮ ಅಪಾಯ ಎದುರಿಸುತ್ತಿದೆ. ನಮ್ಮ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
ನ್ಯೂಸ್ ಲಾಂಡ್ರಿ ಸಂಸ್ಥಾಪಕ ಅಭಿನಂದನ್ ಸೆಖ್ರಿ ಹೇಳುವಂತೆ ಐಟಿ ಅಧಿಕಾರಿಗಳು ಮೊಬೈಲ್, ಲ್ಯಾಪ್ ಟಾಪ್ ನಲ್ಲಿನ ವೈಯಕ್ತಿಕ ಡೇಟಾವನ್ನು ಡೌನ್ ಲೋಡ್ ಮಾಡಿಕೊಂಡು ಹೋಗಿದ್ದಾರೆ. ಐಟಿ ಆಧಿಕಾರಿಗಳು ಅಭಿನಂದನ್ ಅವರ ಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದ್ದಾರೆ ಎಂದು ಗಿಲ್ಡ್ ಆರೋಪಿಸಿದೆ.
ಸೆಖ್ರಿ ಅವರ ಮೊಬೈಲ್, ಲ್ಯಾಪ್ ಟಾಪ್ ಅವರ ವೈಯಕ್ತಿಕ ಮಾಹಿತಿಯನ್ನು ತೆಗೆದುಕೊಂಡು ಹೋಗಿರುವುದು, ಪತ್ರಕರ್ತರ ಸುದ್ದಿಮೂಲವನ್ನು ಪಡೆದಿರುವುದು ಅಪಾಯಕಾರಿ ಬೆಳವಣಿಗೆ. ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ.