ಕೇಂದ್ರ ಶಿಕ್ಷಣ ಸಚಿವಾಲಯ ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಪೋಸ್ಟರ್ ಗಳಿಂದ ಭಾರತ ಮೊದಲ ಪ್ರಧಾನಿ ಜವಾಹರಲಾಲ್ ನೆಹರ ಅವರ ಭಾವಚಿತ್ರವನ್ನು ಹೊರಗಿಟ್ಟಿರುವುದು ಸೇಡಿನ ಕ್ರಮ ಮತ್ತು ರಾಜಕೀಯ ಪ್ರತೀಕಾರ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಒಕ್ಕೂಟ ಸರ್ಕಾರವನ್ನು ಟೀಕಿಸಿದೆ.
ಪೋಸ್ಟರ್ ಗಳಿಂದ ನೆಹರು ಭಾವಚಿತ್ರವನ್ನು ಹೊರಗಿಟ್ಟಿದ್ದು ಕೇಂದ್ರದ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ. ಜವಾಹರಲಾಲ್ ನೆಹರು ಅವರನ್ನು ದ್ವೇಷಿಸಲು ಕಾರಣವೇನೆಂಬುದನ್ನು ದೇಶಕ್ಕೆ ಬಿಜೆಪಿ ಉತ್ತರ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಸ್ವಾಯತ್ತ ಸಂಸ್ಥೆಯಾಗಿದೆ. ಹೀಗಿದ್ದರು ಪೋಸ್ಟರ್ ಗಳಲ್ಲಿ ನೆಹರು ಮತ್ತು ಮೌಲಾನ ಅಬ್ದುಲ್ ಕಲಾಂ ಅಜಾದ್ ಅವರನ್ನು ಹೊರಗಿಟ್ಟು ರಾಜಕೀಯ ಪ್ರತಿಕಾರ ತೀರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದವರು ಮತ್ತು ಇತಿಹಾಸವನ್ನು ಸೃಷ್ಟಿಸಿದವರು ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರನ್ನು ಹೊರಗಿಡುತ್ತಿದ್ದಾರೆ. ರಾಜಕೀಯ ಪ್ರತಿಕಾರದಿಂದ ಮಾಡಿದ ಈ ಕೃತ್ಯವು ಒಳ್ಳೆಯದಲ್ಲ. ಅದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಇದು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೂ ಮಾಡುವ ಅವಮಾನ” ಎಂದು ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ನಂತರ ನೆಹರೂ ಅವರ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಬುದು, ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ನೆಹರು ಅವರನ್ನು ದ್ವೇಷಿಸಲು ಏನು ಮಾಡಿದ್ದಾರೆ? ವಾಸ್ತವವಾಗಿ ಅವರು ನಿರ್ಮಿಸಿದ ಸಂಸ್ಥೆಗಳು ಈಗ ಭಾರತ ಆರ್ಥಿಕತೆ ಪುನಶ್ಚೇತನಗೊಳಿಸಲು ಮಾರಾಟ ಮಾಡಲಾಗುತ್ತಿದೆ” ಎಂದು ರಾವತ್ ತಿಳಿಸಿದರು. ರಾಷ್ಟ್ರೀಯ ಹಣಗಳಿಕೆಯ ಪೈಪ್ ಲೈನ್ ಅನ್ನು ಉಲ್ಲೇಖಿಸಿದ ಅವರು, ಇದು ನೆಹರು ಅವರ ದೂರದೃಷ್ಟಿಯಿಂದಾಗಿ ಆರ್ಥಿಕ ವಿನಾಶದಿಂದ ದೇಶವನ್ನು ಉಳಿಸಬಹುದು” ಎಂದರು.