ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ‘ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಪುರಾಣ ಪಯಣ: ಸಾಮಾಜಿಕ ನೆಲೆಗಳು ವಿಷಯ ಕುರಿತು ರಾಜ್ಯಮಟ್ಟದ ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿಯನ್ನು ತುಮಕೂರಿನ ಅಮಾನಿಕೆರೆ ಹತ್ತಿರವಿರುವ ಕನ್ನಡ ಭವನದಲ್ಲಿ ಏಪ್ರಿಲ್ 25ರಂದು ಬೆಳಗ್ಗೆ 10.30ರಿಂದ ಸಂಜೆಯವರೆಗೂ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ದಿಕ್ಸೂಚಿ ಭಾಷಣ ಮಾಡುವರು. ಲೇಖಕ ಸಚಿನ್ ಕುಂದಾಪುರ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ವಸ್ತುಗಳ ಸೃಜನಶೀಲ ನಿರ್ವಹಣೆ ಕುರಿತು ವಿಷಯ ಮಂಡಿಸುವರು. ಬಳ್ಳಾರಿಯ ಡಾ.ದಸ್ತಗೀರ್ ಸಾಬ್ ದಿನ್ನಿ ಕನ್ನಡ ಸಾಹಿತ್ಯ : ಸಾಮಾಜಿಕ ಚರಿತ್ರೆಯ ಪಯಣ ಪ್ರಜ್ಞೆ ವಿಷಯ ಕುರಿತು ವಿಷಯ ಮಂಡಿಸುವರು. ಚಿತ್ರದುರ್ಗದ ಡಾ.ತಾರಿಣಿ ಶುಭದಾಯಿನಿ ಅಧ್ಯಕ್ಷತೆ ವಹಿಸುವರು.
ಎರಡನೇ ಗೋಷ್ಠಿ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು ಕದಿರೇಹಳ್ಳಿ ಸೋಮಶೇಖರ್ ಕನ್ನಡ ಸಾಹಿತ್ಯ: ಪುರಾಣ ವಸ್ತುವಿನ ಪುನರ್ ಪಯಣದ ಸ್ವರೂಪ ವಿಷಯ ಮಂಡಿಸುವರು. ದಾವಣಗೆರೆ ಡಾ.ತಿಪ್ಪೇಸ್ವಾಮಿ ಕನ್ನಡ ಜನಪದ ಸಾಹಿತ್ಯ: ಜನ ಪುರಾಣಗಳ ಪಯಣ ವಿಷಯವನ್ನು ಮಂಡಿಸಲಿದ್ದಾರೆ. ಧಾರವಾಡದ ಡಾ.ಅನುಸೂಯ ಕಾಂಬ್ಳೆ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸುವರು.
ಅಪರಾಹ್ನ 3.30ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಡಾ.ಸತ್ಯಮಂಗಲ ಮಹದೇವ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಎಚ್.ಗೋವಿಂದಯ್ಯ ಆಶಯ ನುಡಿಗಳನ್ನಾಡುವರು.
ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾಹಿತಿ ಡಾ.ಎಲ್.ಹನುಮಂತಯ್ಯ ಸಮಾರೋಪ ನುಡಿಗಳನ್ನಾಡುವರು. ಲೇಖಕಿ ಶೈಲಾ ನಾಗರಾಜ್ ಭಾಗವಹಿಸಲಿದ್ದು ಲೇಖಕಿ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸುವರು.


