ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಂಡನೆಯಾಗಿದ್ದ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ಬಿಲ್ ಲೋಕಸಭೆಯ ಅನುಮೋದನೆ ಪಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ತುಮಕೂರಿನ ಟೌನ್ಹಾಲ್ ವೃತ್ತದಲ್ಲಿ ಶನಿವಾರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಮಾಜಿ ಶಾಸಕ ಎಸ್.ಷಪಿಅಹಮದ್ ಹಾಗೂ ಇಕ್ಬಾಲ್ ಅಹಮದ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಮಹಿಳಾ ಮೀಸಲಾತಿ ಮಸೂದೆಯ ಹೆಸರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಂಟಕ ಪ್ರಾಯವಾದ ಡಿಲಿಮಿಟೇಷನ್ ಬಿಲ್ ಮಂಡನೆ ಮಾಡಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಬಿಜೆಪಿಯ ಹುನ್ನಾರವನ್ನು ಸಂಸದರು ತಡೆದಿದ್ದಾರೆ. ಇದೊಂದು ಐತಿಹಾಸಿಕ ಜಯ ಎಂದು ಬಣ್ಣಿಸಿದರು.
ಇದೇ ವೇಳೆ ಮಾತನಾಡಿದ ಷಫಿ, ಬಿಜೆಪಿ ಸರಕಾರ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ಜಾರಿಗೆ ತರಲು ಹೊರಟಿದ್ದು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ಮಸೂದೆಗೆ ಸೋಲುಂಟಾಗಿದೆ. ಮಸೂದೆಯ ವಿರುದ್ದವಾಗಿ ಮತ ಚಲಾಯಿಸಿದ ಎಲ್ಲಾ 211 ಸಂಸದರಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಇದು ಜನರಿಗೆ ಸಿಕ್ಕ ಜಯವಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಡಿಲಿಮಿಟೆಷನ್ ಮಾಡದೆ ಮಹಿಳಾ ಮೀಸಲಾತಿ ತರಲು ಹೊರಟಿದ್ದ ಬಿಜೆಪಿಯ ಹುನ್ನಾರವನ್ನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ವಿಫಲಗೊಳಿಸಿವೆ. ಹಾಗಾಗಿ ಪ್ರಧಾನಿ ನರೇಂದ್ರಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಮಹಿಳಾ ಮೀಸಲಾತಿ ಹೆಸರಿನಲ್ಲಿ ಡಿಲಿಮಿಟೆಷನ್ ಬಿಲ್ ಮಂಡನೆ ಮಾಡಿ, ಅಭಿವೃದ್ದಿ ಹೊಂದಿದ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಕಲ್ಲುಚಪ್ಪಡಿ ಎಳೆಯಲು ಮುಂದಾಗಿದ್ದ ಪ್ರಧಾನಿ ಮತ್ತು ಗೃಹ ಸಚಿವರ ಷಡ್ಯಂತ್ರಕ್ಕೆ ತಕ್ಕ ಪಾಠವನ್ನು ಇಂಡಿಯಾ ಮೈತ್ರಿಕೂಟ ಮಾಡಿದೆ. ಇದೇ ರೀತಿಯ ಒಗ್ಗಟ್ಟು ಮುಂದಿನ ದಿನಗಳಲ್ಲಿಯೂ ಮುಂದುವರೆಯುವ ಮೂಲಕ ದೇಶವನ್ನು ಒಡೆಯುವ ಹುನ್ನಾರಗಳಿಗೆ ತೆರೆ ಎಳೆಯಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ಮಹಿಳಾ ಮೀಸಲಾತಿ ಹೆಸರಿನಲ್ಲಿ ಅವೈಜ್ಞಾನಿಕ ಡಿಲಿಮಿಟೆಷನ್ ಬಿಲ್ ತರಲು ಹೊರಟಿದ್ದ ಬಿಜೆಪಿಗೆ ಸೋಲಾಗಿರುವುದು ನನ್ನಂತಹ ಕೋಟ್ಯಂತರ ಜನರಿಗೆ ಸಂತೋಷದ ವಿಚಾರವಾಗಿದೆ. ನಾರಿ ಶಕ್ತಿ ಹೆಸರಿನಲ್ಲಿ ದೇಶದ ಜಿಡಿಪಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ದಕ್ಷಿಣ ರಾಜ್ಯಗಳನ್ನು ಮೂಲೆಗುಂಪು ಮಾಡುವ ಬಿಜೆಪಿಯ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ. ಇದೊಂದು ಐತಿಹಾಸಿಕ ಜಯ ಎಂದು ಹೇಳಿದರು.
ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಮಹಿಳಾ ಮೀಸಲಾತಿಯನ್ನು ತರಲು ಮುಂದಾಗಿದ್ದಾಗ, ಬಿಜೆಪಿ ಅಧಿವೇಶನ ಬಹಿಷ್ಕರಿಗೆ ಹೊರ ನಡೆದಿತ್ತು. 2029ರ ಚುನಾವಣೆಗೆ 2011ರ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಕಲ್ಪಿಸಲು ಹೊರಟಿರುವುದು ಅತ್ಯಂತ ಖಂಡನೀಯ. ಕೇಂದ್ರ ಸರಕಾರಕ್ಕೆ ಮಹಿಳೆಯರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ 2026 ಜನಗಣತಿ ನಂತರ ಡಿಲಿಮಿಟೆಷನ್ ನಡೆಸಿ, ಮಹಿಳಾ ಮೀಸಲಾತಿ ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಷಣ್ಮುಗಪ್ಪ, ಹೆಚ್.ಸಿ.ಹನುಮಂತಯ್ಯ, ನರಸೀಯಪ್ಪ, ಎಸ್.ಸಿ.ಸೆಲ್ ಜಿಲ್ಲಾ ಉಪಾಧ್ಯಕ್ಷ ಸಿದ್ದಾಪುರ ರಂಗಸಾಮಯ್ಯ, ಗುರುಪ್ರಸಾದ್, ಸುವರ್ಣಮ್ಮ, ಸಂಜೀವಕುಮಾರ್, ಆಟೋರಾಜು, ಸೌಭಾಗ್ಯ, ನಾಗಮಣಿ, ಕವಿತಾ, ನಟರಾಜಶೆಟ್ಟಿ, ಶಂಕರಾನAದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಯಾಜ್, ಪಾಲಿಕೆ ಮಾಜಿ ಸದಸ್ಯ ನಯಾಜ್ ಇದ್ದರು.


