ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಜನರ ಸೇವೆ ಮಾಡಬೇಕಾದ ರಾಜ್ಯಸರ್ಕಾರ ಇನ್ನೂ ಓಬಿರಾಯನ ಕಾಲದ ರೀತಿ ಜನತಾದರ್ಶನ ಹೆಸರಲ್ಲಿ ನಾಗರಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆಯೇ ಹೊರತು ಜನರ ಯಾವುದೇ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ತುಮಕೂರು ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಡೆದ ಜನತಾದರ್ಶನದಲ್ಲಿ ಸಲ್ಲಿಕೆಯಾದ ಸಮಸ್ಯೆಗಳಿಗೆ ಎಷ್ಟು ಪರಿಹಾರ ನೀಡಲಾಗಿದೆ, ಉಳಿದ ಪತ್ರಗಳು ಎಲ್ಲಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಆಗ್ರಹಿಸಿದ್ದಾರೆ.
ತುಮಕೂರು ನಗರದ ಕೇಂದ್ರ ಗ್ರಂಥಾಲಯ ಬಳಿ ಬುಧವಾರ ಗೃಹ ಸಚಿವರ ನೃತೃತ್ವದಲ್ಲಿ ಆಯೋಜಿಸಿದ್ದ ಜನತಾದರ್ಶನ ವೇಳೆ ಅನ್ಯಾಯದ ಬಗ್ಗೆ ವಿಡಿಯೋ ಮಾಡುತ್ತಿದ್ದ ಕೆಆರ್ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್ ಅವರಿಗೆ ಧಮ್ಕಿ ಹಾಕಿ, ವಿಡಿಯೋ ಮಾಡುವುದನ್ನು ನಿಲ್ಲಿಸು ಎಂದು ಗದರಿಸಿ, ನಂತರ ಪೊಲೀಸರಿಂದ ಬಂಧನ ಮಾಡಿರುವುದನ್ನು ಖಂಡಿಸಿದ್ದಾರೆ.
ರಾಜ್ಯದ ಗೃಹ ಮಂತ್ರಿಗಳೇ ವಿಡಿಯೋ ಮಾಡ್ಬೇಡಿ ಅಂತ ಹೇಳಿದ್ರೆ ಇವರು ರಾಜ್ಯದಲ್ಲಿ ಪಾರದರ್ಶಕ ವ್ಯವಸ್ಥೆ ತರಲು ಹೇಗೆ ಸಾಧ್ಯ. ವಿಡಿಯೋ ಮಾಡಿದವರನ್ನು ಬಂಧಿಸಿ, ಧ್ವನಿ ಅಡಗಿಸಲು ಪ್ರಯತ್ನಿಸುವ ನಾಟಕಗಳನ್ನು ಗೃಹಸಚಿವರು ಬಿಟ್ಟು, ಕೊನೇ ಅವಧಿಯಲ್ಲಾದರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಜನರನ್ನು ದೂರದ ಊರುಗಳಿಂದ ಇಲ್ಲಿಗೆ ಕರೆಸಿ, ಅವರನ್ನು ಸಾಲಿನಲ್ಲಿ ನಿಲ್ಲಿಸಿ ಅವರಿಂದ ರಾಜ ಮರ್ಯಾದೆ ಪಡೆಯುತ್ತಿರುವ ತುಮಕೂರು ಜಿಲ್ಲಾಡಳಿತ ಮತ್ತು ಗೃಹ ಸಚಿವರಿಗೆ ಕಿಂಚಿತ್ತೂ ಪ್ರಗತಿಯ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾವು ಅನ್ಯಾಯ, ಅಕ್ರಮ, ದುರಾಡಳಿತವನ್ನು ಬಯಲಿಗೆ ಎಳೆಯುತ್ತಿದ್ದಂತೆ ಅಲರ್ಟ್ ಆಗುವ ಅಧಿಕಾರಿಗಳು ಸಾಮಾನ್ಯ ಜನರಿಗೆ ಅನ್ಯಾಯವಾದಾಗ ಎಚ್ಚೆತ್ತುಕೊಂಡಿದ್ದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತಿದ್ದವು. ಆದರೆ, ಇವರು ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾರ್ಯಕ್ರಮ ರೂಪಿಸಿ, ಅವರನ್ನೇ ಸರದಿ ಸಾಲಿನಲ್ಲಿ ನಿಲ್ಲಿಸಿ ಅವರಿಗೆ ಅಪಮಾನ ಮಾಡಿ, ನಾವು ಏನೋ ಸಾಧನೆ ಮಾಡುತ್ತಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಜನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಿ, ಅಲ್ಲೇ ಸೇವೆ ಸಲ್ಲಿಸಿದ್ದೇವೆ ಎಂದು ತೋರಿಸಿಕೊಳ್ಳಬಹುದಿತ್ತಲ್ವೆ?, ಜನಸೇವೆ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚುವ ಮಂತ್ರಿಗಳು ಮತ್ತು ಅಧಿಕಾರಿಗಳು ಭ್ರಷ್ಟಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದ್ದು, ವಾಸ್ತವ ಸಮಸ್ಯೆಗಳನ್ನು ಮರೆ ಮಾಚಿ, ಜನರನ್ನೇ ಯಾಮಾರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ತುಮಕೂರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಾಕ್ಟರ್ ಜಿ ಪರಮೇಶ್ವರ್ ಅಕ್ಷರಶಃ ಪ್ರಜಾಪ್ರಭುತ್ವ ವಿರೋಧಿ ಮಂತ್ರಿಯಾಗಿದ್ದು ಗೊತ್ತಿಲ್ಲ. ಗೃಹ ಸಚಿವರ ದುರಹಂಕಾರದ ಪರಮಾವಧಿ ಮಿತಿಮೀರಿದೆ. ಮನವಿ ಸ್ವೀಕರಿಸುವುದನ್ನು ಸಹ ವಿಡಿಯೋ ಮಾಡುವಂತಿಲ್ಲ ಎನ್ನುವುದಾದರೆ ಜನರ ತೆರಿಗೆ ದುಡ್ಡಲ್ಲಿ ಜನ ಸಂಪರ್ಕ ಸಭೆಗಳನ್ನ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ..,? ಇದು ಅಕ್ಷರಶಃ ಜನ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆಯ ಆಡಳಿತ ಇದರ ಪೂರ್ಣ ಹೊಣೆಗಾರಿಕೆ ಡಾ. ಜಿ ಪರಮೇಶ್ವರ್ ಅವರೇ ಹೊರಬೇಕು ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.


