ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ದೇವರ ಒಡವೆ ಕಳವು ಪ್ರಕರಣದಲ್ಲಿ ದೇವರ ತಾಳಿಯೂ ಕಳವಾಗಿತ್ತು. ದೇವರ ಒಡವೆ ಕಳವಾಗಿ ದೊಡ್ಡ ಅಪಚಾರವಾಗಿದೆ ಎಂದು ಭಕ್ತರು ಕಳವಳಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ಮಾರಮ್ಮ ದೇವಿಗೆ ಸಮರ್ಪಣೆ ಮಾಡಿದರು.
ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ದೇವಸ್ಥಾನ ಸಮಿತಿ ಮುಖಂಡರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮುಖದಲ್ಲಿ ಮಾರಮ್ಮದೇವಿಗೆ ತಾಳಿ ಸಮರ್ಪಿಸಿ ಗೌರಿಶಂಕರ್ ಮತ್ತು ಬಳಗ ವಿಶೇಷ ಪೂಜೆ ಸಲ್ಲಿಸಿದರು.
ದೇವರ ಒಡವೆ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆ ಮಾಡಿ ಕಳವು ಒಡವೆ ವಶಪಡಿಸಿಕೊಂಡು ದೇವರಿಗೆ ಅರ್ಪಿಸಬೇಕು ಎಂದು ಡಿ.ಸಿ.ಗೌರಿಶಂಕರ್ ಒತ್ತಾಯಿಸಿದರು. ಶಕ್ತಿದೇವತೆ ಮಾರಮ್ಮದೇವಿಯನ್ನು ಮುಟ್ಟುವುದಿರಲಿ, ಒಡವೆ ಕಳವು ಮಾಡುವುದು ದೊಡ್ಡ ಅಪಚಾರ. ಎಷ್ಟೆಲ್ಲಾ ಭದ್ರತೆ ಇದ್ದರೂ ಕಳ್ಳತನ ನಡೆದಿರುವುದು ಕಳವಳಕಾರಿ ವಿಚಾರ. ಇಂತಹ ಪ್ರಕರಣ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಉದ್ಯಮಿ ಊರುಕೆರೆ ಜಗದೀಶ್, 30 ಲಕ್ಷ ರೂ. ವೆಚ್ಚದಲ್ಲಿ ಹೆತ್ತೇನಹಳ್ಳಿ ಮಾರಮ್ಮನ ಗರ್ಭಗುಡಿ ನಿರ್ಮಾಣ ಮಾಡಿಸಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ರಾಜಗೋಪುರ ನಿರ್ಮಾಣಕ್ಕೆ ತಾವು, ಜಗದೀಶ್ ಹಾಗೂ ತಮ್ಮ ಗೆಳೆಯರ ಬಳಗ ಎಷ್ಟೇ ಖರ್ಚಾದರೂ ದೇಣಿಗೆ ನೀಡುತ್ತೇವೆ. ಭಕ್ತರು ನೀಡುವ ದೇಣಿಗೆಯ ಪ್ರತಿ ರೂಪಾಯಿಯ ಲೆಕ್ಕವನ್ನು ಪಾರದರ್ಶಕವಾಗಿ ದಾಖಲು ಮಾಡುವಂತೆ ಡಿ.ಸಿ.ಗೌರಿಶಂಕರ್ ತಹಶೀಲ್ದಾರರಿಗೆ ಸೂಚಿಸಿದರು. ಕಾಮಗಾರಿಗೆ ಕಲ್ಲು ಖರೀದಿಗೆಂದು ಗೌರಿಶಂಕರ್, ತಹಶೀಲ್ದಾರ್ ರಾಜೇಶ್ವರಿ ಅವರಿಗೆ 2 ಲಕ್ಷ ರೂ. ದೇಣಿಗೆ ನೀಡಿದರು.
ಹೆತ್ತೇನಹಳ್ಳಿ ಮಾರಮ್ಮದೇವಿಗೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತ ಬಳಗವಿದೆ. ಭಕ್ತರ ಇಷ್ಟಾರ್ಥ ಸಿದ್ಧಿಸುವ, ಕೋರಿಕೆ ಈಡೇಸುತ್ತಾಳೆ ಎಂಬುದು ಭಕ್ತರ ಬಲವಾದ ನಂಬಿಕೆ. ಇತ್ತೀಚೆಗೆ ಮಾರಮ್ಮದೇವಿಯ ಜತ್ರೋತ್ಸವ ವೈಭವದಿಂದ ನಡೆಯಿತು. ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಂಡಿತ್ ನಾರಾಯಣಪ್ಪ, ಪ್ರಕಾಶ್, ಪಾಲನೇತ್ರಯ್ಯ, ಹೆತ್ತೇನಹಳ್ಳಿ ಮಂಜುನಾಥ್, ನರಸಾಪುರ ಹರೀಶ್, ಹಾಲನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ಚಿಕ್ಕನಾರವಂಗಲ ರವಿ, ಕೈದಾಳ ರಮೇಶ್, ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ರಿಂಗ್ ರಸ್ತೆಗೆ ತೀವ್ರ ವಿರೋಧ
ರೈತರ ಜಮೀನು ವಶಪಡಿಸಿಕೊಂಡು, ರೈತರ ವಿರೋಧದ ನಡುವೆ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ನಿರ್ಮಾಣ ಕ್ರಮವನ್ನು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವುದೇ ಸರ್ಕಾರ ಹೋಗಬಾರದು. ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ರೈತರೊಂದಿಗೆ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಹೇಳಿದ ಗೌರಿಶಂಕರ್, ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್ನಲ್ಲಿ ರೈತರ ಸಭೆ ಕರೆದಿದ್ದು, ಹೋರಾಟದ ರೂಪುರೇಶೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.


